ಪಾವಗಡ: ಪುರಸಭೆಯ ಸಹಾಯಕ ಎಂಜಿನಿಯರ್ ಎಂದು ಹೇಳಿಕೊಂಡು ದುಷ್ಕರ್ಮಿಯೊಬ್ಬ ಗುತ್ತಿಗೆದಾರರಿಂದ₹ 3.72 ಲಕ್ಷ ಪಡೆದು ವಂಚಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ನಾನು ಪುರಸಭೆ ಸಹಾಯಕ ಎಂಜಿನಿಯರ್ ಎಂದು ಹೇಳಿಕೊಂಡು ಚಿನ್ನಾರೆಡ್ಡಿ ಎಂಬುವರು ಆಂಧ್ರದ ಕಡಪ ನಗರದ ಸೈಯದ್ ಹೈದರ್ ಆಲಿ ಎಂಬುವರಿಗೆ ಕರೆ ಮಾಡಿದ್ದಾರೆ. ಸಾರ್ವಜನಿಕ ಶೌಚಾಲಯದ ಟೆಂಡರ್ ಕರೆಯಲಾಗಿದೆ. ತಾವು ಉತ್ತಮವಾಗಿ ಗುತ್ತಿಗೆ ಕೆಲಸ ಮಾಡುತ್ತೀರಿ. ಟೆಂಡರ್ಗೆ ಅರ್ಜಿ ಸಲ್ಲಿಸಿ ಎಂದುತಿಳಿಸಿದ್ದಾನೆ.
ದುಷ್ಕರ್ಮಿಯ ಮಾತು ನಂಬಿ ಸೆ. 23ರಂದು ಪಟ್ಟಣಕ್ಕೆ ಆಗಮಿಸಿದ ಸೈಯದ್ ಅಲಿ ಅವರಿಂದ ಡಿ.ಡಿ ತೆಗೆಯಬೇಕು ಎಂದು ಹಣ ಪಡೆದು ಪರಾರಿಯಾಗಿದ್ದಾನೆ. ಬಳಿಕ ಆತನ ಮೊಬೈಲ್ ಸ್ವಿಚ್ಆಫ್ ಆಗಿದ್ದರಿಂದ ಪುರಸಭೆಯ ಬಳಿಗೆ ಹೋಗಿ ಗುತ್ತಿಗೆದಾರರು ವಿಚಾರಿಸಿದ್ದಾರೆ.
ಪುರಸಭೆ ಕಚೇರಿಯಲ್ಲಿ ಚಿನ್ನಾರೆಡ್ಡಿ ಎಂಬ ಹೆಸರಿನವರು ಕೆಲಸ ಮಾಡುತ್ತಿಲ್ಲ. ಯಾವುದೇ ಸಾರ್ವಜನಿಕ ಶೌಚಾಲಯದ ಟೆಂಡರ್ ಕರೆಯಲಾಗಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ.