ಹುಲಿಯೂರುದುರ್ಗ: ಅನಿಶ್ಚಿತ ಮಳೆ, ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿ ಯುವ ಸಮುದಾಯ ಕೃಷಿ ಕ್ಷೇತ್ರ ಕಡೆಗಣಿಸಿರುವುದು ಸಹಜ. ಆದರೆ ಬೇಸಾಯ ನಿರ್ವಹಣೆ ಕ್ರಮಗಳಲ್ಲಿ ಆಗಿರುವ ಬದಲಾವಣೆಗಳಿಂದ ಕೃಷಿ ಕೆಲಸ ಈಗ ಸರಳವಾಗಿದೆ.
ವಿವಿಧ ಬಗೆಯ ಕೃಷಿ ಯಂತ್ರೋಪಕರಣ ರೈತರ ಜತೆಯಾಗಿವೆ. ಉಳುಮೆ, ಬಿತ್ತನೆ, ಕೊಯ್ಲು, ಕಾಳು ವಿಂಗಡಣೆಯಂತಹ ಪ್ರತಿ ಚಟು ವಟಿಕೆಗಳಲ್ಲಿ ಇವುಗಳ ಬಳಕೆ ಹೆಚ್ಚಾಗಿದೆ. ಕೊರೊನಾ ಸೃಷ್ಟಿಸಿರುವ ಸ್ಥಿತ್ಯಂತರ, ಆತಂಕದಿಂದ ತಮ್ಮ ನೆಲ ಮೂಲ ಮಣ್ಣಿನ ವಾಸನೆ ಹಿಡಿದು ಹಳ್ಳಿಗಳತ್ತ ಮರಳುವವರನ್ನು ಉತ್ತೇಜಿಸಿದೆ.
ಪ್ರತಿ ಮನೆಗಳಲ್ಲಿ ಇರುತ್ತಿದ್ದ ರಾಸುಗಳು, ಕೊಟ್ಟಿಗೆ, ಗೊಂತು ಈಗ ಮಾಯವಾಗಿವೆ. ಮರದ ನೇಗಿಲು, ನೊಗ, ಕೂರಿಗೆಗಳನ್ನು ಗೆದ್ದಲು ತಿನ್ನುತ್ತಿವೆ. ಕಬ್ಬಿಣದ ಅಲುಬೆ, ಹೆಗ್ಗುಂಟೆಯಂತಹ ಸಾಂಪ್ರದಾಯಿಕ ಕೃಷಿ ಸಾಧನಗಳು ತುಕ್ಕು ಹಿಡಿದಿವೆ.
ಮರು ರೂಪ ಪಡೆದ ಇವು ಟ್ರಾಕ್ಟರ್ ಎಂಜಿನ್ನಿನ ಭಾಗಗಳಾಗಿ ಒಕ್ಕಲುತನದ ಮುಂದುವರಿಕೆಯ ಸಾಧನಗಳಾಗಿ ಬಳಕೆಯಾಗುತ್ತಿವೆ.
ಬಹುತೇಕ ಹಳ್ಳಿಗಳಲ್ಲಿ ಟ್ರಾಕ್ಟರ್ ಹೊಂದಿರುವ ಯುವಕರು ರೈತರ ಕೃಷಿ ಚಟುವಟಿಕೆಗಳನ್ನು ಯಾಂತ್ರೀಕರಣ ಗೊಳಿಸಿದ್ದಾರೆ. ಆ ಮೂಲಕ ತಮ್ಮ ದುಡಿಮೆಯ ಮಾರ್ಗವನ್ನೂ ಕಂಡುಕೊಂಡಿದ್ದಾರೆ.