ತುಮಕೂರು: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸ್ಥಗಿತಗೊಳಿಸಿದ್ದು, ಇದು ವಿದ್ಯಾರ್ಥಿ ಸಂಘಟನೆಯ ರಾಜಿ ರಹಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಕಾರ್ಮಿಕ ಸಂಘಟನೆ ಮುಖಂಡರಾದ ಮಂಜುಳಾ ಗೋನಾವರ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಎಐಡಿಎಸ್ಒ ವತಿಯಿಂದ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಾದ್ಯಂತ ಎನ್ಇಪಿ ಹಿಮ್ಮೆಟ್ಟಿಸಿ ಹೋರಾಟ ನಡೆಯಿತು. ಹಲವು ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಭಂಡತನದಿಂದ ಎನ್ಇಪಿ ಜಾರಿಗೊಳಿಸಿತು. ಯಾವುದೇ ತಯಾರಿ ಇಲ್ಲದೆ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗಿತ್ತು. ಇದು ವಿದ್ಯಾರ್ಥಿ, ಶಿಕ್ಷಕರನ್ನು ಆತಂಕಕ್ಕೆ ತಳ್ಳಿತ್ತು. ಎಐಡಿಎಸ್ಒ ಸಂಘಟನೆ ವಿದ್ಯಾರ್ಥಿಗಳಿಗೆ ಸ್ಪಂದಿಸಿ ರಾಜ್ಯ ಮಟ್ಟದಿಂದ ಹಳ್ಳಿಯ ವರೆಗೆ ಹೋರಾಟ ರೂಪಿಸಿತ್ತು. ನಿರಂತರ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದರು.
ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷೆ ಟಿ.ಅಶ್ವಿನಿ, ‘ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಅನ್ಯಾಯದ ವಿರುದ್ಧ ಹೋರಾಟ ಕಟ್ಟಿದ್ದರು. ಎನ್ಇಪಿ ವಿರೋಧಿಸಿ, ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ ಒಂದು ಕೋಟಿ ಸಹಿ ಸಂಗ್ರಹದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು 5 ಲಕ್ಷ ಸಹಿ ಮಾಡಿದ್ದರು’ ಎಂದು ಸ್ಮರಿಸಿದರು.
ಇನ್ನೂ ಹೆಚ್ಚಿನ ಹೋರಾಟ ಕಟ್ಟಲು ಮತ್ತು ಶೈಕ್ಷಣಿಕ ಸಮಸ್ಯೆ ಬಗೆಹರಿಸಿಕೊಳ್ಳಲು ವಿದ್ಯಾರ್ಥಿ ಸಮೂಹ ಒಂದಾಗಬೇಕು. ಎಲ್ಲರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ, ಪದಾಧಿಕಾರಿಗಳಾದ ಅಕ್ಷರ, ಭರತ್, ಸುಮಂತ್, ಮಹೇಶ್, ಪಲ್ಲವಿ, ನಾಗರಾಜು, ನಂದೀಶ್ ಇತರರು ಹಾಜರಿದ್ದರು.