ಗುಡಿಬಂಡೆ: 5 ವರ್ಷಗಳ ಹಿಂದೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವೇಳೆ ಮನೆ, ನಿವೇಶನ ಕಳೆದುಕೊಂಡ 280 ಜನರಲ್ಲಿ 70 ಜನರಿಗೆ ಲಾಟರಿ ಮೂಲಕ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಿವೇಶನವನ್ನು ಹಂಚಿಕೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಮುಖ್ಯರಸ್ತೆಯ ವಿಸ್ತರಣೆ ವೇಳೆ ಅನೇಕರು ನಿವೇಶನಗಳನ್ನು ಕಳೆದುಕೊಂಡಿದ್ದರು. ನಿವೇಶನ ನೀಡಲು ಹಲವಾರು ನಿಯಮಗಳಿದ್ದ ಕಾರಣ ಇಷ್ಟು ತಡವಾಗಿ ಹಂಚಿಕೆ ಮಾಡಲಾಗಿದೆ. ಮುಖ್ಯರಸ್ತೆಯಲ್ಲಿ ಶೇ 100ರಷ್ಟು ಮನೆ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದವರಿಗೂ ಡಿಸೆಂಬರ್ ತಿಂಗಳೊಳಗೆ ಹಂಚಿಕೆ ಮಾಡಲಾಗುವುದು. ಒಂದು ವೇಳೆ ಈ ಹಂಚಿಕೆಯಲ್ಲಿ ಲೋಪಗಳು ಕಂಡುಬಂದಲ್ಲಿ ಕೂಡಲೇ ತಹಶೀಲ್ದಾರ್ ಅಥವಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ನೀಡಿ. ಲೋಪ ಸಾಬೀತಾದಲ್ಲಿ ಅಂತವರಿಗೆ ನೀಡಲಾದ ನಿವೇಶನವನ್ನು ಕೂಡಲೇ ರದ್ದುಗೊಳಿಸಿ ಅರ್ಹರಿಗೆ ನೀಡಲಾಗುವುದು ಎಂದರು.
ಈಗಾಗಲೇ 280 ಜನರಿಗೆ ನೀವೇಶನ ನೀಡಲು ಬ್ರಾಹ್ಮಣರಹಳ್ಳಿಗೆ ಹೋಗುವ ವಿದ್ಯಾಗಿರಿ ಸಮೀಪ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ 9 ಎಕರೆ ಜಮೀನು ನೀಡಲಾಗಿದ್ದು, ಅದರಲ್ಲಿ 1 ಎಕರೆ 36 ಗುಂಟೆ ಜಮೀನು ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿದೆ. 70 ಜನರಿಗೆ ನಿವೇಶನದ ಪತ್ರಗಳನ್ನು ನೀಡಲಾಗಿದೆ. ಈಗ ಜಾಗದಲ್ಲಿ ಕಲ್ಲು ಬಂಡೆ ಮಣ್ಣಿನ ದಿಬ್ಬುಗಳು ಇದ್ದು ಜಾಗವನ್ನು ಸಮ ಮಾಡಲು ಹಾಗೂ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಗಡಿಯನ್ನು ಸಹ ಗುರುತಿಸಿದೆ. ನೀಲ ನಕ್ಷೆ ತಯಾರಿಸಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.