ತುಮಕೂರು: ಸಫಾಯಿ ಕರ್ಮಚಾರಿಗಳು ಪೂರಕ ದಾಖಲೆಗಳ ಜತೆಗೆ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿದರೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಕೃಷ್ಣಭಗತ್ ಹೇಳಿದರು.
ನಗರದಲ್ಲಿ ಈಚೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ, ‘ಈಗಾಗಲೇ 157 ಮ್ಯಾನುಯಲ್ ಸ್ಕ್ಯಾವೆಂಜೆರ್ಸ್ಗಳಿಗೆ ತಲಾ ₹40 ಸಾವಿರ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಮಂಜುನಾಥ್, ‘ಅರ್ಜಿ ಪಡೆದು ಭರ್ತಿ ಮಾಡಿ ವಿಳಂಬ ಮಾಡದೇ ಸೂಕ್ತ ದಾಖಲಾತಿಗಳೊಂದಿಗೆ ಮೂರು ದಿನಗಳ ಒಳಗೆ ಸಲ್ಲಿಸಿದರೆ ಲೀಡ್ ಬ್ಯಾಂಕ್ ಮೂಲಕ ಸಂಬಂಧಿಸಿದ ಬ್ಯಾಂಕ್ಗಳಿಗೆ ಕಳುಹಿಸಲಾಗುವುದು. ಅರ್ಹರಿಗೆ ಸಾಲ ಸೌಲಭ್ಯ ದೊರೆಯಲಿದೆ’ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್, ರಾಜ್ಯ ಜಾಗೃತಿ ದಳದ ಸದಸ್ಯ ಓಬಳೇಶ್, ಜಿಲ್ಲಾ ಜಾಗೃತಿ ಸದಸ್ಯ ಕದ್ರಪ್ಪ ಇತರರು ಭಾಗವಹಿಸಿದ್ದರು.