ಕುಣಿಗಲ್: ಕೊರೊನಾ ಲಾಕ್ಡೌನ್ನಿಂದಾಗಿ ಬಹುತೇಕರು ಒಂದಲ್ಲೊಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ, ಪಟ್ಟಣದ ನವಚೇತನಾ ಅಂಧ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಾಗದೆ ಅತಂತ್ರರಾಗಿದ್ದಾರೆ.
ವಸತಿ ಶಾಲೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ 42 ಅಂಧ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಕೊರೊನಾದಿಂದಾಗಿ ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ತೆರಳಿದ್ದು, ವಿದ್ಯಾಗಮಾ ಯೋಜನೆಯಿಂದಲೂ ವಂಚಿತರಾಗಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಬಡಕುಟುಂಬದಿಂದ ಬಂದವರಾಗಿದ್ದಾರೆ. ಪೋಷಕರ ಬಳಿ ಮೊಬೈಲ್ ಇಲ್ಲ. ಕೆಲವೆಡೆ ನೆಟ್ವರ್ಕ್ ಸಮಸ್ಯೆ ಇದ್ದು, ಆನ್ಲೈನ್ ಶಿಕ್ಷಣ ಫಲಪ್ರದವಾಗಿಲ್ಲ. ಅಂಧ ವಿದ್ಯಾರ್ಥಿಗಳಿಗೆ ಧ್ವನಿ ಗ್ರಹಣದ ಮೂಲಕ ಪಾಠಮಾಡುತ್ತಿದ್ದರೂ, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎನ್ನುತ್ತಾರೆ ಮುಖ್ಯ ಶಿಕ್ಷಕ ಸದಾಶಿವಯ್ಯ.
ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದರೆ, ಅವರಲ್ಲಿ ಒಬ್ಬರು ಅಂಧ ಶಿಕ್ಷಕರಾಗಿದ್ದಾರೆ. ಇಬ್ಬರು ಅಂಧ ಅತಿಥಿ ಶಿಕ್ಷಕರಿದ್ದಾರೆ. ಶಾಲೆ ಪ್ರಾರಂಭವಾಗದ ಕಾರಣ ಅವರಿಗೂ ಉದ್ಯೋಗವಿಲ್ಲವಾಗಿದೆ.
ಅಂಧ ಶಿಕ್ಷಕರೊಬ್ಬರು ಪಟ್ಟಣದಲ್ಲಿರುವ ಒಬ್ಬನೇ ವಿದ್ಯಾರ್ಥಿಯ ಹೊಸಹಳ್ಳಿ ಗ್ರಾಮದ ಮನೆಗೆ ಮುಂಭಾಗದಲ್ಲಿ ವಿದ್ಯಾಗಮಾ ಯೋಜನೆಯಲ್ಲಿ ಪಾಠ ಮಾಡುತ್ತಿದ್ದಾರೆ. ಉಳಿದಂತೆ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ಅವರಿಗೆ ವಿದ್ಯಾಗಮಾ ಯೋಜನೆಯಲ್ಲಿ ಪಾಠ ಮಾಡಲು ಗ್ರಾಮಗಳಿಗೆ ತೆರಳಲು ಅಂಧರಾಗಿರುವ ಶಿಕ್ಷಕರು ಬೇರೆಯವರನ್ನು ಆಶ್ರಯಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚು ವೆಚ್ಚವನ್ನು ನಾವೇ ಭರಿಸಬೇಕಾಗುತ್ತದೆ. ಪಾಠ ಮಾಡಬೇಕು ಎಂಬ ಆಸೆ ಇದ್ದರೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕ ರಾಮಕೃಷ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ಪೋಷಕರಾದ ಲತಾ ಪ್ರತಿಕ್ರಿಯಿಸಿ, ಶಾಲೆ ಇರದ ಕಾರಣ ಮಕ್ಕಳನ್ನು ನೋಡಿಕೊಂಡು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.