ತುಮಕೂರು: ‘ಅಂಬಿಗರ ಚೌಡಯ್ಯ ಮತ್ತು ಶಿವಕುಮಾರ ಸ್ವಾಮೀಜಿ ಸಮ ಸಮಾಜದ ಕನಸು ಕಂಡವರು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಇತರರಿಗೆ ಪ್ರೇರಣೆಯಾಗಬೇಕು’ ಎಂದು ತಹಶೀಲ್ದಾರ್ ಸಿದ್ದೇಶ್ ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಗಂಗಾ ಮತಸ್ಥರ ಸಂಘದಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಮತ್ತು ಶಿವಕುಮಾರ ಸ್ವಾಮೀಜಿಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಂಗಾ ಮತಸ್ಥರ ಸಂಘ ಮುಖಂಡ ದಿವಾಕರ್, ‘ಶಿವಕುಮಾರ ಸ್ವಾಮೀಜಿಯ ಜಾತ್ಯತೀತ ನಡೆ, ಇಡೀ ಮನುಕುಲಕ್ಕೆ ಮಾದರಿ. ಅಂಬಿಗರ ಚೌಡಯ್ಯ ನದಿ ದಾಟಿಸುವ ಅಂಬಿಗರ ಕೆಲಸ ಮಾಡುತ್ತ ಅತ್ಯಂತ ಸರಳವಾಗಿ ಬದುಕಿದರು. ಸುಮಾರು 7 ಕಿ.ಮೀ ಸುತ್ತಳತೆಯ ಭೂಮಿಯನ್ನು ಮಠವೊಂದಕ್ಕೆ ದಾನ ನೀಡಿ, ದಾನಪುರವನ್ನು ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
ಸಮುದಾಯದ ಮುಖಂಡ ಚಂದ್ರಪ್ಪ, ‘ವಚನ ಸಾಹಿತ್ಯದಲ್ಲಿ ಬಂಡಾಯ ವಚನಕಾರ ಎನಿಸಿಕೊಂಡವರು ಅಂಬಿಗರ ಚೌಡಯ್ಯ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕು’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲಾ ಗಂಗಾ ಮತಸ್ಥರ ಸಂಘದ ಉಪಾಧ್ಯಕ್ಷ ವಿರೂಪಾಕ್ಷ, ಮುಖಂಡರಾದ ತಿಪಟೂರು ಪಾಲಾಕ್ಷ, ಗರುಡಯ್ಯ, ಕೃಷ್ಣಪ್ಪ, ಬಾಬು ಇತರರು ಹಾಜರಿದ್ದರು.