ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಬದಲಾವಣೆ ಅಸಾಧ್ಯ: ಎಚ್.ಡಿ. ಕುಮಾರಸ್ವಾಮಿ

Published 14 ಏಪ್ರಿಲ್ 2024, 16:03 IST
Last Updated 14 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ತುಮಕೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಗ್ಯಾರಂಟಿಗಳಿಗೆ ಮಹತ್ವ ನೀಡಿದ್ದು, ಇದರಿಂದ ರಾಜ್ಯದ ಬದಲಾವಣೆ ಸಾಧ್ಯವಿಲ್ಲ ಎಂದು ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಹೆಬ್ಬೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚಿಸಿ ಮಾತನಾಡಿ, ‘ಗರೀಬಿ ಹಠಾವೋ’ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‍ನವರು ಈಗ ಜನರಿಗೆ ಕುಕ್ಕರ್‌ ಹಂಚುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಖಾಲಿ ಮಾಡಿ, ಅನುದಾನಕ್ಕಾಗಿ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಸರಿಯಾಗಿ ಯೋಜನೆ ರೂಪಿಸಿ ಕೇಂದ್ರದ ಹಣ ಕೇಳಿದರೆ ಅಗತ್ಯ ಸಹಕಾರ ಸಿಗುತ್ತದೆ. ಕಾಂಗ್ರೆಸ್‍ನವರು ಕೇಂದ್ರದ ಜತೆ ಸಂಬಂಧ ಹಾಳು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಈಗಿನ ಸರ್ಕಾರದಲ್ಲಿ ಇದುವರೆಗೆ ಕನಿಷ್ಠ ಒಂದಾದರೂ ರೈತ ಪರವಾದ ಯೋಜನೆ ಜಾರಿಯಾಗಿದೆಯೇ ?’ ಎಂದು ಪ್ರಶ್ನಿಸಿದರು.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ, ‘ನಾನು ಹೊರಗಿನವನಲ್ಲ, ದೇವೇಗೌಡರ ಗರಡಿಯಲ್ಲಿ ಕೆಲಸ ಕಲಿತಿದ್ದೇನೆ. ಬೆಂಗಳೂರಿನ ಜನ ತಮ್ಮ ಸಮಸ್ಯೆ ಆಲಿಸಲು ಅವಕಾಶ ಕೊಟ್ಟಿದ್ದರು. ಬೆಂಗಳೂರಿನಂತೆ ಇಲ್ಲಿಯೂ ಕೆಲಸ ಮಾಡಿ ತೋರಿಸುವೆ’ ಎಂದರು.

ಶಾಸಕರಾದ ಕೆ.ಗೋಪಾಲಯ್ಯ, ಬಿ.ಸುರೇಶ್‍ಗೌಡ, ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಚಿದಾನಂದ್‌ ಎಂ.ಗೌಡ, ಮುಖಂಡರಾದ ಎಚ್.ನಿಂಗಪ್ಪ, ಎಚ್‌.ಎಸ್‌.ರವಿಶಂಕರ್‌, ಆರ್.ಸಿ.ಆಂಜಿನಪ್ಪ, ಚೌಡರೆಡ್ಡಿ, ಟಿ.ಆರ್.ಕುಂಭಯ್ಯ, ಟಿ.ಆರ್.ನಾಗರಾಜು, ಉಮೇಶ್‍ಗೌಡ, ರಾಜಶೇಖರ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT