ತುಮಕೂರು: ನಗರದ ಸಪ್ತಗಿರಿ ಬಡಾವಣೆಯ ಸೂರ್ಯನಾರಾಯಣ ಅವರ ಮನೆಯ ಸುಮಾರು ದಿನಗಳಿಂದ ಬಳಸದೇ ಇದ್ದ ಶೌಚಾಲಯದಲ್ಲಿ ಸೇರಿಕೊಂಡಿದ್ದ 4.5 ಅಡಿ ಉದ್ದದ ನಾಗರಹಾವನ್ನು ಉರಗ ಸಂರಕ್ಷಣಾ ಸಂಸ್ಥೆ (ವಾರ್ಕೊ) ರಕ್ಷಣೆ ಮಾಡಿದೆ.
ಮಧ್ಯಾಹ್ನ ಸೂರ್ಯನಾರಾಯಣ ಅವರು ಶೌಚಾಲಯ ಶುಚಿ ಮಾಡಲು ಹೋಗಿದ್ದಾಗ ಹಾವನ್ನು ಕಂಡಿದ್ದಾರೆ. ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಬೇಸಿಗೆ ಕಾಲವಾದ್ದರಿಂದ ಹಾವುಗಳು ತಂಪಾಗಿರುವ ಸ್ಥಳದಲ್ಲಿ ಸೇರುವುದು ಸಾಮಾನ್ಯ. ಹಾವುಗಳ ಸಂತಾನೋತ್ಪಿ ಕಾಲವಾದ್ದರಿಂದ ಹಾವಿನ ಮರಿಗಳು ಕಂಡರೆ ಯಾವುದೇ ಕಾರಣಕ್ಕೂ ಹೊಡೆದು ಸಾಯಿಸುವ ಪ್ರಯತ್ನವನ್ನು ಮಾಡಬಾರದು ಎಂದು ಉರಗ ತಜ್ಞ ಮನು ಮನವಿ ಮಾಡಿದ್ದಾರೆ.
ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆ ಮಾಡಬಹುದು ಎಂದು ಮನು ತಿಳಿಸಿದ್ದಾರೆ.