ತಿಪಟೂರು: ನಾಫೆಡ್ ಮೂಲಕ ಉಂಡೆ ಕೊಬ್ಬರಿ ಖರೀದಿಯು ಜಿಲ್ಲೆಯಲ್ಲಿನ ತಾಲ್ಲೂಕುವಾರು ಕೊಬ್ಬರಿ ಉತ್ಪಾದನೆ ಆಧಾರದಲ್ಲಿದ್ದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ರಾಜ್ಯ ರೈತ ಸಂಘದ ಬಿಳಿಗೆರೆಪಾಳ್ಯ ನಾಗೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್ಗೆ ₹12 ಸಾವಿರದಂತೆ ಗರಿಷ್ಠ 62,500 ಮೆಟ್ರಿಕ್ ಟನ್ ಖರೀದಿಗೆ ಮರು ನೋಂದಣಿಗೆ ಅವಕಾಶ ನೀಡಿರುವುದು ಉತ್ತಮವಾಗಿ ಎಂದರು.
ರಾಜ್ಯದಲ್ಲಿ ಪ್ರಮುಖವಾಗಿ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯುತ್ತಿದ್ದಾರೆ. ಆದರೆ ಉಳಿದ ಜಿಲ್ಲೆಗಳಲ್ಲಿ ತೆಂಗು ಬೆಳೆದು ಎಳನೀರು ಹಾಗೂ ಕಾಯಿಯಾಗಿ ಹೆಚ್ಚಾಗಿ ಬಳಸುತ್ತಾರೆ. ಆದರೆ ಸರ್ಕಾರ ಸುತ್ತೂಲೆಗಳ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದೇ ಮಾನದಂಡ ಅನ್ವಯ ಮಾಡಿರುವುದು ನ್ಯಾಯಸಮ್ಮತವಾಗಿಲ್ಲ ಎಂದರು.
ರೈತ ಸಂಘ ಸಾಮೂಹಿಕ ನಾಯಕತ್ವದ ವರಿಷ್ಠ ಯೋಗೀಶ್ವರ ಸ್ವಾಮಿ ಮಾತನಾಡಿ, ಕೊಬ್ಬರಿ ತಾಲ್ಲೂಕುವಾರು ಖರೀಗೆ ಮುಂದಾಗಬೇಕು. ಎಪಿಎಂಸಿಗಳಿಗೆ ಒಳಪಡುವಂತೆ ನಿಯಮ ರೂಪಿಸಬೇಕಿದೆ. ಈಗಾಗಲೇ ಲಕ್ಷಾಂತರ ಚೀಲ ಕೊಬ್ಬರಿ ಸಂಗ್ರಹವಿದ್ದು, ಅದನ್ನು ಸದ್ಯಕ್ಕೆ ನಾಫೆಡ್ ಖರೀದಿ ಮುಕ್ತಾಯವಾಗುವ ತನಕ ಹೊರಗೆ ತರಲು ಬಿಡಬಾರದು ಎಂದು ಹೇಳಿದರು.
ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು ತಿಮ್ಲಾಪುರ, ಜಯಚಂದ್ರ ಶರ್ಮಾ, ಶ್ರೀಕಾಂತ್ ಕೆಳಹಟ್ಟಿ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವಣ್ಣ, ಜನವಾಹಿನಿ ಮಹಿಳಾ ಸಂಘ ಜಿಲ್ಲಾ ಸಂಚಾಲಕಿ ಕೆ.ಎಂ.ರಾಜಮ್ಮ, ನಾಗರಾಜು ಈರಲಗೆರೆ ಪಾಲ್ಗೊಂಡಿದ್ದರು.