ತುಮಕೂರು: ಅಗ್ನಿಪಥಯೋಜನೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಸೈನಿಕರಿಗೆ ದ್ರೋಹ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ, ಬಿಜೆಪಿ ಸರ್ಕಾರ ತೊಲಗಲಿ ಎಂದು ಕಾಂಗ್ರೆಸ್ ಮುಖಂಡರು ಘೋಷಣೆಗಳನ್ನು ಕೂಗಿದರು.
ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಅಧಿಕಾರ ಹಿಡಿಯುವ ಸಲುವಾಗಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದವರು ಮತ್ತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಪ್ರಕಾರ ಇದುವರೆಗೆ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ, ಸುಳ್ಳು ಹೇಳುವುದರಲ್ಲಿ ಕೇಂದ್ರ ಸರ್ಕಾರ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ‘ಅಂಬಾನಿ, ಅದಾನಿ ಅವರಿಗೆ ಬೇಕಾದ ಎಲ್ಲ ಸೌಲಭ್ಯ ನೀಡುವ ಸರ್ಕಾರಕ್ಕೆ ದೇಶದ ನಾಗರಿಕರ ರಕ್ಷಣೆಗಾಗಿ ಶ್ರಮಿಸುವ ಸೈನಿಕರ ಬಗ್ಗೆ ಕಾಳಜಿಯಿಲ್ಲ. ಕೂಡಲೇ ಅಗ್ನಿಪಥಯೋಜನೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಮುಖಂಡ ಮುರಳೀಧರ ಹಾಲಪ್ಪ, ‘ತಾತ್ಕಾಲಿಕವಾಗಿ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ. ದೇಶ ಅಧಃಪತನದ ಕಡೆಗೆ ಸಾಗಿದೆ. ರಾಷ್ಟ್ರಕ್ಕೆ ರಕ್ಷಣೆ ನೀಡಿದವರನ್ನು ಬಿಜೆಪಿ ಕಚೇರಿಯ ಗಾರ್ಡ್ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿರುವುದು ಸರಿಯಲ್ಲ’ ಎಂದು ಕಿಡಿ ಕಾರಿದರು.
ಸೇನೆಯಲ್ಲಿ ಶಾಶ್ವತವಾದ ಸ್ಥಾನ ನೀಡಲಿ. ಅಗ್ನಿಪಥಬಿಜೆಪಿ ಕಾರ್ಯಾಲಯದಲ್ಲಿಯೇ ಇರಲಿ. ಪ್ರತಿಯೊಬ್ಬರು ಯೋಜನೆ ವಿರೋಧಿಸುತ್ತಿದ್ದಾರೆ. ರೈತರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ರೀತಿಯಲ್ಲಿ ಅಗ್ನಿಪಥಹಿಂದಕ್ಕೆ ಪಡೆಯಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆಯ ಸದಸ್ಯ ನಯಾಜ್ ಅಹ್ಮದ್, ಮುಖಂಡ ಇಕ್ಬಾಲ್ ಅಹ್ಮದ್ ಇತರರು ಇದ್ದರು.