ತುಮಕೂರು: ಈ ವಾರವೂ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಮುಂದುವರಿಸಿದ್ದು, ಕೆ.ಜಿ.ಗೆ₹10ರ ವರೆಗೂ ಹೆಚ್ಚಳವಾಗಿದೆ. ಕೆಲವಾರಗಳಿಂದ ಬೆಲೆ ದುಬಾರಿಯಾಗಿದ್ದು, ಮತ್ತೆ ಏರಿಕೆಯತ್ತಲೇ ಸಾಗಿದೆ.
ಸಂಕ್ರಾಂತಿ, ಇತರ ಹಬ್ಬಗಳು ಬರುತ್ತಿದ್ದು, ಕಡಲೆ ಬೀಜದ ಧಾರಣೆ ಹೆಚ್ಚಳವಾಗಿದ್ದು, ಕೆ.ಜಿ.ಗೆ ₹10ರಿಂದ ₹15ದುಬಾರಿಯಾಗಿದೆ. ಆದರೆ ಬೇಳೆಗಳ ಬೆಲೆ ಕೊಂಚ ಕಡಿಮೆಯಾಗಿದೆ. ಧನುರ್ಮಾಸ ಕಳೆದು ಶುಭ ಕಾರ್ಯಗಳುಆರಂಭವಾದರೆ ಬೆಲೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕ್ಯಾರೆಟ್ ಬೆಲೆ ಇಳಿದಿದ್ದು, ಪ್ರಸ್ತುತ ಕೆ.ಜಿ ₹15–20ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಬೆಲೆ ಕೆ.ಜಿ.ಗೆ ₹30–35 ಇದೆ. ಈರುಳ್ಳಿ ಬೆಲೆ ಇಳಿಕೆಯತ್ತ ಸಾಗಿದೆ. ಉಳಿದ ತರಕಾರಿಗಳ ಬೆಲೆ ಕೆ.ಜಿ.ಗೆ ₹10ರಿಂದ 15ರ ನಡುವೆ ಇದೆ. ಒಟ್ಟಾರೆ ತರಕಾರಿಗಳ ಧಾರಣೆ ಬಹುತೇಕ ಸ್ಥಿರವಾಗಿದೆ.
ಹಣ್ಣಿನ ಬೆಲೆ: ಹಣ್ಣುಗಳ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಲ್ಲಂಗಡಿ, ಏಲಕ್ಕಿ ಬಾಳೆ ಹಣ್ಣಿನ ಬೆಲೆ ತುಸು ತಗ್ಗಿದೆ. ಉಳಿದಂತೆ ಯಥಾಸ್ಥಿತಿ ಮುಂದುವರಿದಿದೆ.
ಮೀನು ದುಬಾರಿ: ಮೀನಿನ ಬೆಲೆ ಕಡಿಮೆಯಾಗುತ್ತಿಲ್ಲ. ಕಳೆದ ಮೂರು ವಾರಗಳಿಂದ ಏರಿಕೆಯತ್ತಲೇ ಮುಖ ಮಾಡಿದ್ದು, ಬೂತಾಯಿ, ಬೊಳಿಂಜಿರ್ ತಳಿ ಮೀನು ಬರುತ್ತಿಲ್ಲ. ಬಂಗುಡೆ ಕೆ.ಜಿ ₹230, ಅಂಜಲ್ ಕೆ.ಜಿ ₹700,ಬಿಳಿ ಮಾಂಜಿ ₹790, ಕಪ್ಪುಮಾಂಜಿ ₹550, ಸೀಗಡಿ ₹450ಕ್ಕೆ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.