ಮಧುಗಿರಿ: ಪಟ್ಟಣದ ದಂಡಿನ ಮಾರಮ್ಮ ಜಾತ್ರೆ ಅಂಗವಾಗಿ ಶುಕ್ರವಾರ ಮುಂಜಾನೆ ಅಗ್ನಿಕೊಂಡ ಹಾಯುವ ಮೂಲಕ ಸಾವಿರಾರು ಭಕ್ತರು ಹರಕೆ ತೀರಿಸಿದರು.
ರಾಜ್ಯ ಹಾಗೂ ನೆರೆಯ ಸೀಮಾಂಧ್ರ ಪ್ರದೇಶದ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ದೇವಾಲಯ ಮುಂಭಾಗ ಗುರುವಾರ ರಾತ್ರಿಯಿಂದಲೇ ಜಮಾಯಿಸಿದ್ದರು. ಸಾವಿರಾರು ಮಹಿಳೆಯರು ಆರತಿ ಮತ್ತು ದೀಪಗಳನ್ನು ಹೊತ್ತು ಅಗ್ನಿಕೊಂಡ ಬಳಿ ಕಾದು ಕುಳಿತಿದ್ದರು.
ದೇಗುಲ ಅರ್ಚಕ ದೇವಿಯ ಉತ್ಸವ ಮೂರ್ತಿ ಹೊತ್ತು ಅಗ್ನಿಕೊಂಡ ಪ್ರವೇಶಿಸಿದರು. ನಂತರ ಭಕ್ತರು ಸಾಲಿನಲ್ಲಿ ನಿಂತು ಅಗ್ನಿಕೊಂಡ ಹಾಯ್ದರು. ಅಗ್ನಿಕೊಂಡದ ಸುತ್ತಲೂ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ, ತಹಶೀಲ್ದಾರ್ ಸಿಗ್ಮತ್ ಉಲ್ಲಾ, ಡಿವೈಎಸ್ಪಿ ರಾಮಚಂದ್ರಪ್ಪ, ಸಿಪಿಐ ರವಿ, ಕಂದಾಯ ನಿರೀಕ್ಷಕ ನಾಗೇಶ್, ಅರ್ಚಕ ಅರುಣ್ ಹಾಜರಿದ್ದರು.