ಶಿರಾ: ನಗರದ ಸಂತೇಪೇಟೆಯ ಸರ್ಕಾರಿ ಶಾಲೆಯ ಮುಂಭಾಗದ ಹಳೇ ರಾಷ್ಟ್ರೀಯ ಹೆದ್ದಾರಿ- 4ರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ 3 ಮಂದಿ ಅಂತರ ರಾಜ್ಯ ಲಾರಿ ಕಳ್ಳರನ್ನು ನಗರ ಠಾಣೆ ಪೊಲೀಸರು ಬಂಧಿಸಿ ಲಾರಿ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸಡೈಕಾಲ್ ಗ್ರಾಮದ ಎಸ್.ಮಣಿಕಂಠನ್, ಒರಿಸ್ಸಾದ ಮನೋಜ್ ತಿರಕಿ ಹಾಗೂ ತಮಿಳುನಾಡಿನ ಪಳನಿಸ್ವಾಮಿ ಬಂಧಿತರು. ಲಾರಿಯನ್ನು ಮಾರಾಟ ಮಾಡಿದ್ದ ಸೆಂಥಿಲ್ ನಾಥನ್, ಪ್ರಸಾಥ್ ಮತ್ತು ಬಾಷಾ ಮೃತಪಟ್ಟಿದ್ದಾರೆ.
ನಗರದ ಸಂತೇಪೇಟೆಯ ನಾಗರಾಜು ಅವರಿಗೆ ಸೇರಿದ ಸುಮಾರು ₹11 ಲಕ್ಷ ಮೌಲ್ಯದ ಲಾರಿಯನ್ನು 2020ರ ಫೆಬ್ರುವರಿ 23ರಂದು ರಾತ್ರಿ ಕಳವು ಮಾಡಿರುವ ಬಗ್ಗೆ ಶಿರಾ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಆರೋಪಿಗಳಾದ ಮಣಿಕಂಠನ್ ಹಾಗೂ ಮನೋಜ್ ಅವರು ಲಾರಿಯನ್ನು ಕಳವು ಮಾಡಿ ತಮಿಳುನಾಡಿನ ಸೇಲಂಗೆ ತೆಗೆದುಕೊಂಡು ಹೋಗಿ ಪಳನಿ ಸ್ವಾಮಿ ಮತ್ತು ಸೆಂಥಿಲ್ ನಾಥನ್ ಅವರಿಗೆ ಮಾರಾಟ ಮಾಡಿದ್ದರು. ನಂತರ ಪಳನಿ ಸ್ವಾಮಿ ಮತ್ತು ಸೆಂಥಿಲ್ ನಾಥನ್ ರವರು ಪ್ರಸಾಥ್ ಮತ್ತು ಬಾಷಾ ಎನ್ನುವರಿಗೆ ಮಾರಾಟ ಮಾಡಿದ್ದರು.
ಪ್ರಸಾದ್ ಮತ್ತು ಬಾಷಾ ಅವರು ಲಾರಿಯ ಎಂಜಿನ್ ನಂಬರ್, ಚಾಸಿಸ್ ನಂಬರ್ ಮತ್ತು ಆರ್.ಸಿ ನಂಬರ್ ಬದಲಿಸಿ ಬೇರೆ ವಾಹನದ ಆರ್.ಸಿ ನಂಬರ್, ವಾಹನ ಸಂಖ್ಯೆ ಬದಲಿಸಿ ತಮಿಳುನಾಡಿನ ವೇಲೂರು ಜಿಲ್ಲೆಯ ತಾಂಡಲಂಕೃಷ್ಣಪುರಂ ಗ್ರಾಮದ ಕುಮಾರ್ ಎನ್ನುವರಿಗೆ ₹12.60 ಲಕ್ಷಕ್ಕೆ ಮಾರಾಟ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಲಾರಿಯನ್ನು ಮಾರಾಟ ಮಾಡಿದ್ದ ಸೆಂಥಿಲ್ ನಾಥನ್, ಪ್ರಸಾಥ್ ಮತ್ತು ಬಾಷಾ ಮೃತಪಟ್ಟಿದ್ದಾರೆ. ಉಳಿದ ಆರೋಪಿಗಳಾದ ಮಣಿಕಂಠನ್, ಮನೋಜ್ ತಿರಕಿ, ಪಳನಿ ಸ್ವಾಮಿ ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಡಿವೈಎಸ್ಪಿ ಕುಮಾರಪ್ಪ ನೇತೃತ್ವದಲ್ಲಿ ಸಿಪಿಐ ಪಿ.ಬಿ.ಹನುಮಂತಪ್ಪ, ಪಿಎಸ್ಐ ಅವಿನಾಶ್, ಭಾರತಿ ಹಾಗೂ ಸಿಬ್ಬಂದಿ ಕುಮಾರ್, ಬಸವರಾಜು ದುರ್ಗಯ್ಯ, ನಾಗರಾಜು, ಗೋಪಿನಾಥ್, ಮಂಜುನಾಥ್, ಶಿವಕುಮಾರ್ ತಂಡದವರು ತನಿಖೆ ನಡೆಸಿದ್ದರು.