ತಿಪಟೂರು: ಮನುಷ್ಯನ ನಿತ್ಯದ ಚಟುವಟಿಕೆಯಲ್ಲಿ ಅವಿಭಾಜ್ಯ ಅಂಗವಾಗಿ ಸೇರಿಕೊಂಡಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ದೃಢ ಸಂಕಲ್ಪದ ಅಗತ್ಯವಿದೆ ಎಂದು ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಸಬಾ ಹೋಬಳಿಯ ರಂಗಾಪುರ ಪಂಚಾಯತಿಯ ಅಂನಗೊಂಡನಹಳ್ಳಿಯಲ್ಲಿ ಟೈಡ್ ಸಂಸ್ಥೆ ಹಾಗೂ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸಂಘ, ಪಾರ್ವತಮ್ಮ ಆತ್ಮ ನಿರ್ಭಯ ಸಂಘ, ಧರ್ಮಸ್ಥಳ ಗ್ರಾಮೀಣಾಭಿ ವೃದ್ಧಿ ಸಂಘಗಳು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಕಸ ವಿಲೇವಾರಿಗೆ ಅನೇಕ ನಿಯಮ ರೂಪಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಟೈಡ್ ಸಂಸ್ಥೆಯ ರಂಗಸ್ವಾಮಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್ ಉತ್ಪನ್ನ ದೊರಕುವುದರಿಂದ ಮನುಷ್ಯ ಈ ವಸ್ತುವಿಗೆ ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್ದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಖಂಡ ಅಗ್ರಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವಂತಹ ದೇಶಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ನಲ್ಲಿ ವಿಷಕಾರಿ ರಾಸಾಯನಿಕಗಳಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.
ರಂಗಾಪುರ ಗ್ರಾ.ಪಂ. ಪಿಡಿಒ ಶಿವಕುಮಾರ್ ಮಾತನಾಡಿ, ರಂಗಾಪುರ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ಘಟಕ ಪ್ರಾರಂಭಿಸಿ ತ್ಯಾಜ್ಯವನ್ನು ಗ್ರಾಮಗಳ ಮಟ್ಟದಿಂದಲೂ ಸಂಗ್ರಹಿಸಲಾಗುವುದು. ಪ್ರತಿ ಕುಟುಂಬ ದಿನಕ್ಕೆ ಸುಮಾರು ಅರ್ಧ ಕೆಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುತ್ತದೆ. ಇದಕ್ಕೆ ಕಡಿವಾಣ ಅಗತ್ಯ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ನಯನ ದಯಾನಂದ್, ಆನಂದ್, ಟೈಡ್ ಸಂಸ್ಥೆಯ ಜ್ಯೋತಿ, ಆಶಾ ಮೇಲ್ವಿ ಚಾರಕಿ ಸುಧಾ, ಶಿಕ್ಷಕಿಯರಾದ ಮೇರಿ, ವೀನಾಕ್ಷಿ, ತ್ರಿವೇಣಿ, ಬಸವರಾಜು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಇದ್ದರು.