ತುಮಕೂರು: ಕೊರೊನಾ ವಾರಿಯರ್ಸ್ಗಳಾದ ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ರೋಟರಿ ಮತ್ತು ಜಿಲ್ಲಾ ಆಯುರ್ವೇದ ಪದವೀಧರರ ಸಂಘದಿಂದ ರೋಗನಿರೋಧಕ ಔಷಧಿಗಳ ಕಿಟ್ಗಳನ್ನು ವಿತರಿಸಲಾಯಿತು.
ರೋಟರಿ ಅಧ್ಯಕ್ಷ ಜಿ.ಎನ್.ಮಹೇಶ್ ಮಾತನಾಡಿ, ‘ಕೊರೊನಾ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಕೆಲಸಕ್ಕೆ ನಾವು ಅಭಿನಂದನೆ ಸಲ್ಲಿಸಬೇಕು. ಅವರ ಆರೋಗ್ಯದ ಬಗ್ಗೆ ಯೋಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಡಾ.ಪ್ರಕಾಶ್, ಕೊರೊನಾ ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ರೋಗ ನಿರೋಧಕ ಶಕ್ತಿಗಳನ್ನು ಯಾವ ರೀತಿ ಹೆಚ್ಚಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಪೌರಕಾರ್ಮಿಕರು ಹೆಚ್ಚು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು. ತಮ್ಮ ಕುಟುಂಬ ಸದಸ್ಯರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕೊಡಬೇಕು ಎಂದು ಸಲಹೆ ಮಾಡಿದರು.
ಆಯುರ್ವೇದ ಪದವೀಧರರ ಸಂಘದ ಗೌರವಾಧ್ಯಕ್ಷ ಡಾ.ನಂಜುಂಡಸ್ವಾಮಿ, ಕಿಟ್ ಬಳಕೆಯ ಬಗ್ಗೆ ತಿಳಿವಳಿಕೆ ನೀಡಿದರು.
ರೋಟರಿ ಸಂಸ್ಥೆಯ ಮಲ್ಲೇಶಯ್ಯ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಸುಮಾ ಬಾಲಾಜಿ, ಪಾಲಿಕೆ ಸದಸ್ಯೆ ನಿರ್ಮಲಾ ಶಿವಕುಮಾರ್, ಡಾ.ಅರವಿಂದ್, ಡಾ.ತಾರಾನಾಥ್, ಜನಾರ್ದನ್, ಅಭಿನಂದನ್, ನಾರಾಯಣ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.