ತುರುವೇಕೆರೆ: ಲೋಕಸಭಾ ಚುನಾವಣೆ ಕಾರ್ಯಕ್ಕೆ ತಾಲ್ಲೂಕಿನಿಂದ ನಿಯೋಜನೆಗೊಂಡಿದ್ದ ನೌಕರರು ಭಾನುವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆದ ತರಬೇತಿಗೆ ತೆರಳಲು ಬಸ್ ಸೌಕರ್ಯವಿಲ್ಲದೆ ಲಾರಿ, ರೈಲು, ಟೆಂಪೊಗಳಲ್ಲಿ ಸಂಚರಿಸಿದರು.
ತುರುವೇಕೆರೆಯಿಂದ ಪಾವಗಡ, ಮಧುಗಿರಿ, ಕೊರಟಗೆರೆ, ಕುಣಿಗಲ್, ಚಿಕ್ಕನಾಯಕನಹಳ್ಳಿ, ತುಮಕೂರು ಮತ್ತು ಗುಬ್ಬಿ ತಾಲ್ಲೂಕುಗಳಿಗೆ ಸಾವಿರಾರು ಸಂಖ್ಯೆಯ ನೌಕರರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾತ್ರ ನೌಕರರು ನಿಗದಿತ ಸಮಯಕ್ಕೆ ತರಬೇತಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿತ್ತು.
ತುಮಕೂರು ಜಿಲ್ಲಾಡಳಿತ ಯಾವುದೇ ಬಸ್ ವ್ಯವಸ್ಥೆ ಮಾಡದ ಕಾರಣ ಬೆಳಿಗ್ಗೆ 10ಕ್ಕೆ ಪ್ರಾರಂಭವಾಗುವ ತರಬೇತಿಗೆ ದೂರದ ಪಾವಗಡ, ಮಧುಗಿರಿ, ಶಿರಾ ಸೇರಿದಂತೆ ವಿವಿಧ ತಾಲ್ಲೂಕುಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಬಸ್ ಇಲ್ಲದೆ ನೌಕರರು ಪರದಾಡಿದರು. ಲಾರಿ, ಟೆಂಪೊ, ಆಟೊ, ಬೈಕ್, ಖಾಸಗಿ ಕಾರು ಹತ್ತಿ ತೆರಳಿದರು.