ತಿಪಟೂರು: ತಾಲ್ಲೂಕಿನ ಜನರಿಗೆ ಅನುಕೂಲವಾಗುವಂತೆ ಎರಡು ಆಮ್ಲಜನಕ ಸಹಿತ ತುರ್ತು ಚಿಕಿತ್ಸಾ ವಾಹನ ಹಾಗೂ ಸೋಂಕಿತರು ಮನೆಗೆ ತೆರಳಲು ಪ್ರತ್ಯೇಕ ವಾಹನಗಳನ್ನು ತಾಲ್ಲೂಕು ಕಾಂಗ್ರೆಸ್ನಿಂದ ಒಟ್ಟು 4 ವಾಹನಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಬಯಲು ರಂಗ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೊರೊನಾ ಎರಡನೇ ಅಲೆಯ ಮುಂಜಾಗ್ರತೆ ಬಗ್ಗೆ ತಿಳಿದಿದ್ದ ಕೇಂದ್ರ ಸರ್ಕಾರ ಸಕಲಸೌಲಭ್ಯಗಳನ್ನು ಜನರಿಗೆ ಒದಗಿಸುವಲ್ಲಿ ಎಡವಿದೆ. ಒಟ್ಟಿನಲ್ಲಿ ಇಡೀದೇಶದಲ್ಲಿ ಕೊರೊನಾ ಹೊಡೆದೊಡಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ. ವಿರೋಧ ಪಕ್ಷದ ಒತ್ತಾಯಕ್ಕೆ ಮಣಿದು ಕೆಲವು ಸೌಕರ್ಯಗಳನ್ನು ನೀಡಲು ಮುಂದಾಗಿದ್ದಾರೆ ಎಂದರು.
ದೇಶದಲ್ಲಿ ಲಸಿಕೆ ಅಭಾವ ಎದುರಾಗಿದೆ. ಹೊರ ದೇಶಗಳಿಗೆ ಲಸಿಕೆ ಕಳುಹಿಸುವ ಮೊದಲು ಅಗತ್ಯವಿರುವ ಲಸಿಕೆಗಳನ್ನು ದೇಶದ ಜನರಿಗೆ ನೀಡಬೇಕಿತ್ತು ಎಂದರು.
ರಾಜ್ಯದ ಸ್ಥಿತಿಗತಿಗಳ ಬಗ್ಗೆ ಅರಿಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಲು ಅನುಮತಿ ಕೋರಿದರೂ ನಿರಾಕರಿಸಿರುವುದು ಬೇಸರದ ಸಂಗತಿ. ಸರ್ಕಾರ ಆರೋಗ್ಯ ವಿಷಯದಲ್ಲಿ ಗೋಪ್ಯತೆಗಳನ್ನು ಬಿಟ್ಟು ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಮೇ 25 ರಂದು ಬೆಳಿಗ್ಗೆ 11 ಗಂಟೆಗೆ ಎರಡು ಆಮ್ಲಜನಕ ಸಹಿತ ತುರ್ತು ಚಿಕಿತ್ಸಾ ವಾಹನಗಳನ್ನು ಸೇವೆಗೆ ನೀಡಲಾಗುವುದು. ನಂತರ ಪೊಲೀಸ್ ಇಲಾಖೆಗೆ, ವೈದ್ಯಕೀಯ ಸಿಬ್ಬಂದಿಗೆ, ಪೌರಕಾರ್ಮಿಕರಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಪಿಪಿಇ ಕಿಟ್ ನೀಡಲಾಗುವುದು ಎಂದರು.
ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಟಿ.ಎನ್.ಪ್ರಕಾಶ್, ಕೆಪಿಸಿಸಿ ಸದಸ್ಯ ಯೋಗೇಶ್, ಎನ್.ಎಂ.ಸುರೇಶ್, ಯೋಗಾನಂದ, ಲೋಕನಾಥ್ ಸಿಂಗ್ ಇದ್ದರು.