ಕುಣಿಗಲ್: ಕೊರೊನಾ ಎರಡನೆ ಅಲೆ ಮನುಕುಲಕ್ಕೆ ಮಾನವೀಯತೆಯ ಪಾಠ ಕಲಿಸಿದೆ. ಆರೋಗ್ಯವಂತ ಸಮಾಜಕ್ಕಾಗಿ ದುಶ್ಚಟಗಳಿಂದ ಮುಕ್ತರಾಗಿ, ಪೌಷ್ಟಿಕ ಆಹಾರ ಸೇವಿಸಲು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿ ಹೇಳಿದರು.
ತಾಲ್ಲೂಕಿನ ಎಚ್.ಡಿ.ರಾಜೇಶ್ ಗೌಡ ಸೇವಾ ಪ್ರತಿಷ್ಠಾನದಿಂದ ಶುಕ್ರವಾರ ಹುತ್ರಿದುರ್ಗ ಹೋಬಳಿಯ ಸಂತೆಪೇಟೆಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣಾರ್ಥಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ಕೊರೊನಾ ಸಂಕಷ್ಟದ ದಿನಗಳಲ್ಲಿ ದೇವಾಲಯ ಮುಚ್ಚಿದ್ದರೂ ನಾಡಿನ ಆಸ್ಪತ್ರೆಗಳು ಬಾಗಿಲು ತೆಗೆದಿತ್ತು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಸೇವಾ ಮನೋಭಾವದಿಂದ ಬೆಲೆಕಟ್ಟಲಾಗದ ಕೆಲಸ ಮಾಡಿದ್ದಾರೆ ಎಂದರು.
ಪ್ರತಿಷ್ಠಾನ ರಾಜೇಶ್ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಓಂಕಾರ್, ಮುಖಂಡರಾದ ಋತ್ವೀಕ್ ಸುರೇಶ್ ಗೌಡ, ಧೀರಜ್, ಪೂರ್ಣ ಸುಧಾ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥರಾದ ಸುಜ್ಯೋತಿ, ದುರ್ಗೇಶ್, ಕನ್ನಡ ಸತ್ಯ ರಂಗಣ್ಣ ಇದ್ದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಒಕ್ಕಲಿಗ ಸಂಘದ ದಂತ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ, ಬೆಂಗಳೂರಿನ ಪೂರ್ಣ ಸುಧಾ ಕ್ಯಾನ್ಸರ್ ಫೌಂಡೇಷನ್ನಿಂದ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡರು. 1,500 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.