ತುಮಕೂರು: ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ 25ರಷ್ಟು ಸ್ಥಾನಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿಯೂ ಆದ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಶುಕ್ರವಾರ ತಿಳಿಸಿದರು.
ಶಿರಾ ತಾಲ್ಲೂಕು ರಂಗನಾಥಪುರದಲ್ಲಿ ಮಾತನಾಡಿ, ‘ವಸತಿ ಶಾಲೆಗಳಿರುವ ಗ್ರಾಮಗಳ ಮಕ್ಕಳು ಕೇವಲ ಕಟ್ಟಡ ನೋಡಿ ಸಂತೋಷಪಡಬಾರದು. ವಸತಿ ಶಾಲೆಯ ಸೌಲಭ್ಯವೂ ಈ ಮಕ್ಕಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ 4 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಶೈಕ್ಷಣಿಕ ವಿಚಾರದಲ್ಲಿ ಮುಂದಿದ್ದಾರೆ’ ಎಂದರು.