ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು

ತಿರಸ್ಕೃತಗೊಂಡಿದ್ದ ಮತದಿಂದಲೂ ಖುಲಾಯಿಸಿತು ಅದೃಷ್ಟ
Last Updated 30 ಡಿಸೆಂಬರ್ 2020, 10:08 IST
ಅಕ್ಷರ ಗಾತ್ರ

ತುಮಕೂರು/ಗಂಗಾವತಿ/ಶಿರಸಿ: ಚುನಾವಣೆಯಲ್ಲಿ ಒಂದೊಂದು ಮತವು ಅತ್ಯಂತ ಪ್ರಮುಖವಾಗುತ್ತದೆ ಎಂಬ ಮಾತಿಗೆ ಈ ಘಟನೆಗಳು ಸಾಕ್ಷಿಯಾಗಿವೆ‌. ತುಮಕೂರು ಮತ್ತು ಗಂಗಾವತಿಯಲ್ಲಿ ಇಬ್ಬರು ಅಭ್ಯರ್ಥಿಗಳು ಒಂದೇ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಶಿರಸಿಯಲ್ಲಿ ತಿರಸ್ಕೃತ ಮತ ಪರಿಶೀಲನೆಯಲ್ಲಿ ಅಭ್ಯರ್ಥಿಯೊಬ್ಬರು ಜಯ ಗಳಿಸಿದ್ದಾರೆ.

ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿ ಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ. ಅಭ್ಯರ್ಥಿ ಟಿ.ವಿ..ಶಿವಕುಮಾರ್ ಅವರಿಗೆ 163 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಕೃಷ್ಣಪ್ಪಗೆ 162 ಮತ ಪಡೆದಿದ್ದಾರೆ‌. ಈ ಮೂಲಕ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದ್ದಾರೆ.

ಒಂದೇ ಮತದಲ್ಲಿ ರೋಚಕ ಗೆಲುವು: ಗಂಗಾವತಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ.

ಎದುರಾಳಿ ಅಭ್ಯರ್ಥಿಯಾದ ಶಾಂತಮ್ಮ 78 ಮತಗಳನ್ನು ಪಡೆದರೆ, ರಾಣಿ ನಾಗೇಂದ್ರ 79 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ತಿರಸ್ಕೃತ ಮತ ಪರಿಶೀಲನೆಯಲ್ಲಿ ಗೆದ್ದ ಅಭ್ಯರ್ಥಿ: ಶಿರಸಿ ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿಯ ಗೋಣಸರ ವಾರ್ಡಿನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ(ಎ) ಮಹಿಳೆ ಮೀಸಲು ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಪಾರ್ವತಿ ಗೌಡ ಹಾಗೂ ವೀಣಾ ಗೌಡ ತಲಾ 127 ಮತ ಪಡೆದಿದ್ದರು. ಈ ವೇಳೆ ತಿರಸ್ಕೃತಗೊಂಡಿದ್ದ ಮತಗಳನ್ನು ಮರುಪರಿಶೀಲಿಸಲಾಯಿತು. ವೀಣಾ ಗೌಡ ಅವರು ಪಡೆದಿದ್ದ ಆಟೊ ಚಿಹ್ನೆಗೆ ಮತದ ಮುದ್ರೆಯ ಅಲ್ಪ ಭಾಗ ತಾಗಿಕೊಂಡಿದ್ದರಿಂದ ಅದನ್ನು ಗೆಲುವಿಗೆ ಪರಿಗಣಿಸಲಾಯಿತು.

ಕಮಲಾಪುರ (ಕಲಬುರ್ಗಿ ಜಿಲ್ಲೆ):ತಾಲ್ಲೂಕಿನ ಅಂಬಲಗಾ ಗ್ರಾಮ ಪಂಚಾಯಿತಿಯ ಮಲ್ಲಿನಾಥ ಮಾಚಿ 305 ಮತ ಪಡೆದು ಕೇವಲ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಇವರ ಪ್ರತಿಸ್ಪರ್ಧಿ ರಾಜಶೇಖರ ಮೇಗಪಿ 304 ಮತ ಪಡೆದು ಪರಾಭವಗೊಂಡಿದ್ದಾರೆ.

ಇಬ್ಬರು ಮತಪತ್ರಗಳಿಗೆ ಹೆಬ್ಬೆಟ್ಟಿನ ಗುರುತು ಹಾಕಿದ್ದು ಅವು ರಾಜಶೇಖರ ಅವರ ಆಟೊ ಚಿಹ್ನೆ ಮೇಲೆ ಒತ್ತಿದ್ದಾರೆ. 34 ಅಸಿಂಧು ಆಗಿವೆ.

ಮರು ಎಣಿಕೆ ಮಾಡುವಂತೆ ಅಭ್ಯರ್ಥಿ ಪರ ಏಜೆಂಟ್ ಶಿವಪುತ್ರಪ್ಪ ಮೇಗಪ್ಪಿ ಒತ್ತಾಯಿಸುತ್ತಿದ್ದಾರೆ.

ಒಂದು ಮತ ಅಂತರದಿಂದ ಇಬ್ಬರು ಅಭ್ಯರ್ಥಿಗಳು ವಿಜಯ

ಮೊಳಕಾಲ್ಮುರು (ಚಿತ್ರದುರ್ಗ):ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಇಬ್ಬರು ಕೇವಲ ಒಂದು ಮತ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತುಮಕೂರು ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಮ್ತಿ ಮತಗಟ್ಟೆಯಿಂದ ಜಂಗಮ ಕಾಮಯ್ಯ ಅವರು 167 ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಗುಡ್ಲನಾಯಕ 166 ಮತ ಪಡೆದುಪರಾಭವಗೊಂಡಿದ್ದಾರೆ.

ರಾಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಪೋತ ಜೋಗಿ ಹಳ್ಳಿಯಲ್ಲಿ ಬಸಮ್ಮ 152 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ತಾಯಮ್ಮ 151 ಮತಗಳಿಸಿ ಪರಾಭವಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT