ಶಿರಾ: ‘ನಿರಂತರ ಅಭ್ಯಾಸದಿಂದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪೋಷಕರು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು’ ಎಂದು ತುಮಕೂರು ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪ್ರೆಸಿಡೆನ್ಸಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜೀವನ ಕೌಶಲ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಸಮಯ ಅತ್ಯಮೂಲ್ಯವಾದುದು. ನೀವು ಇಂದು ಆಸ್ತಿ, ಹಣ ಕಳೆದುಕೊಂಡರೆ ಮತ್ತೆ ಅದನ್ನು ಪಡೆಯಬಹುದು. ಆದರೆ, ಕಳೆದು ಹೋದ ಸಮಯ ಜೀವನದಲ್ಲಿ ಮತ್ತೆ ಮರಳಿಬಾರದು. ಆದ್ದರಿಂದ ಅಭ್ಯಾಸದ ಹೊರತು ಬೇರೆ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರೆಸಿಡೆನ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಚಿದಾನಂದ ಎಂ. ಗೌಡ ಮಾತನಾಡಿದರು.
ಪ್ರಾಂಶುಪಾಲ ಡಿ.ಕೆ. ಸುಬ್ರಹ್ಮಣ್ಯ, ಆಡಳಿತಾಧಿಕಾರಿ ಗೋಪಿನಾಥ್, ಉಪನ್ಯಾಸಕ ಸೋಮಶೇಖರ್, ದ್ವಿತೀಯ ಪಿಯು ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.