ತುರುವೇಕೆರೆ: ‘ಚಿಕ್ಕನಾಯಕನಹಳ್ಳಿಯಲ್ಲಿ ಸುಮಾರು ₹400 ಕೋಟಿಗೂ ಅಧಿಕ ವೆಚ್ಚದ 400 ಮೆಗಾವ್ಯಾಟ್ ಕೆಪಿಟಿಸಿಎಲ್ ಸ್ಥಾವರವನ್ನು ಶೀಘ್ರ ಪ್ರಾರಂಭಿಸಲಾಗುವುದು. ಇದರಿಂದ ತುರುವೇಕೆರೆ, ತಿಪಟೂರು ಸೇರಿದಂತೆ 5 ತಾಲ್ಲೂಕಿಗಳಿಗೆ ವಿದ್ಯುತ್ ಪೂರೈಕೆ ಮಾಡಬಹುದು’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿದಾಸನಹಳ್ಳಿ ಗ್ರಾಮದಲ್ಲಿ ಕೆಪಿಟಿಸಿಎಲ್ನಿಂದ ₹6.14 ಕೋಟಿ ವೆಚ್ಚದ ವಿದ್ಯುತ್ ಉಪಸ್ಥಾವರ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇನ್ನೂ 18ರಿಂದ 20 ಎಂವಿಎಸ್ಗಳನ್ನು ಆರಂಭಿಸುವ ಚಿಂತನೆಯಿದೆ. ಆ ಮೂಲಕ ರೈತರ ಮತ್ತು ಸಾರ್ವಜನಿಕರ ವಿದ್ಯುತ್ ವ್ಯತ್ಯಯ ತಪ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳ ಪಟ್ಟಿ ಮಾಡಿ, ಅವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎಂದು ಸ್ಥಳದಲ್ಲಿಯೇ ಇದ್ದ ಬೆಸ್ಕಾಂ ಸಿಇ ಗೋವಿಂದಪ್ಪ ಅವರಿಗೆ ಸೂಚಿಸಿದರು.
ಶಾಸಕ ಮಸಾಲ ಜಯರಾಂ ಮಾತನಾಡಿ, ಈ ಭಾಗದಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ತೀವ್ರವಾಗಿತ್ತು. ಹರಿದಾಸನಹಳ್ಳಿಯಲ್ಲಿ ಸ್ಥಾಪನೆಯಾಗಿರುವ ಉಪಸ್ಥಾವರದಿಂದ ಲೋಕಮ್ಮನಹಳ್ಳಿ ಮತ್ತು ಬಾಣಸಂದ್ರ ಗ್ರಾಮ ಪಂಚಾಯಿತಿಗಳ ಸುಮಾರು 30 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೆ.ಬಿ.ಕ್ರಾಸ್ನಿಂದ ನೆಲ್ಲಿಗೆರೆ ರಸ್ತೆ ನಿರ್ಮಾಣಕ್ಕೆ ₹280 ಕೋಟಿ ಅನುದಾನ ಬಿಡುಗಡೆಯಾಗಿದೆ. ತಾಲ್ಲೂಕಿನಲ್ಲಿ ಸುಮಾರು 600 ಮನೆಗಳಿಗೆ ನಿರಂತರ ಜ್ಯೋತಿ ಸಂಪರ್ಕ ನೀಡಲಾಗಿಲ್ಲ. ಕೂಡಲೇ ಸಂಪರ್ಕ ಕಲ್ಪಿಸಬೇಕು ಎಂದು ವೇದಿಕೆಯಲ್ಲಿದ್ದ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು.
ಕೆಪಿಟಿಸಿಎಲ್ನ ಎಂ.ಡಿ ಮಂಜುಳಾ, ಮುಖ್ಯ ಎಂಜಿನಿಯರ್ ಆದಿ ನಾರಾಯಣ್, ಬೆಸ್ಕಾಂ ಸಿಇ ಗೋವಿಂದಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.