ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮತ ಜಾಗೃತಿ ಅಭಿಯಾನಕ್ಕೆ ತೆರೆ

ಸ್ಲಂ ಸಮಿತಿಯಿಂದ ಬೈಕ್‌ ರ್‍ಯಾಲಿ
Published 24 ಏಪ್ರಿಲ್ 2024, 5:49 IST
Last Updated 24 ಏಪ್ರಿಲ್ 2024, 5:49 IST
ಅಕ್ಷರ ಗಾತ್ರ

ತುಮಕೂರು: ಸ್ಲಂ ಸಮಿತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ರಕ್ಷಣೆಗಾಗಿ ಮತ ಜಾಗೃತಿ’ ಅಭಿಯಾನಕ್ಕೆ ಮಂಗಳವಾರ ತೆರೆ ಬಿತ್ತು.

‘ಸಂವಿಧಾನ ರಕ್ಷಣೆಗಾಗಿ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ ಬೆಂಬಲಿಸಿ’ ಎಂದು ತುಮಕೂರು, ಮಧುಗಿರಿ, ಕೊರಟಗೆರೆ, ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ನಗರಗಳಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿತ್ತು. ಜನರಲ್ಲಿ ಮತದಾನ, ರಾಜಕೀಯದ ಕುರಿತು ಅರಿವು ಮೂಡಿಸಲಾಯಿತು. ಇದರ ಭಾಗವಾಗಿ ನಗರದ 20 ಕೊಳೆಗೇರಿಗಳಲ್ಲಿ ಬೈಕ್‌ ರ್‍ಯಾಲಿ ನಡೆಯಿತು.

‘ಅಸಂಖ್ಯಾತ ಜನರು ಸಂವಿಧಾನದ ಉಳಿವಿಗೆ ಮುಂದಾಗಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಜಾತಿ ಜನಗಣತಿ ನಡೆಸಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ದೇಶದ ಸಂಪತ್ತು ಹಂಚಿಕೆ ಮಾಡಲಾಗುತ್ತದೆ’ ಎಂದು ಮಾಜಿ ಶಾಸಕ ರಫಿಕ್‌ ಅಹ್ಮದ್‌ ಹೇಳಿದರು.

ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ‘ಜನರಲ್ಲಿ ರಾಜಕೀಯ ತಿಳಿವಳಿಕೆ ಹೆಚ್ಚಿಸುವಲ್ಲಿ ಅಭಿಯಾನ ಯಶಸ್ವಿಯಾಗಿದೆ. ರಾಷ್ಟ್ರದ ಜನರು ಸಂವಿಧಾನ ಉಳಿಸುವ ಪಣ ತೊಟ್ಟಿದ್ದಾರೆ. ರೈತ, ಕಾರ್ಮಿಕ, ಮಹಿಳಾ ಮತ್ತು ಯುವ ಜನರ ಹೋರಾಟಕ್ಕೆ ಫಲ ಸಿಕ್ಕಿದೆ. ಈ ಸಲ ‘ಇಂಡಿಯಾ’ ಒಕ್ಕೂಟ ಗೆಲುವು ಸಾಧಿಸಲಿದೆ’ ಎಂದರು.

ಬೈಕ್‌ ರ್‍ಯಾಲಿಯು ಪಿಕೆಎಸ್‌ ಕಾಲೊನಿಯಿಂದ ಪ್ರಾರಂಭವಾಗಿ ಹನುಮಂತಪುರ, ಭಾರತಿ ನಗರ, ದೇವರಾಯಪಟ್ಟಣ, ಎಪಿಎಂಸಿ ಯಾರ್ಡ್‌, ಬಟವಾಡಿ, ಎಸ್‌.ಎಸ್‌.ವೃತ್ತ, ಕೋತಿತೋಪು, ಎನ್‌.ಆರ್.ಕಾಲೊನಿ, ಮಂಡಿಪೇಟೆ, ಮಾರಿಯಮ್ಮ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಗಿತು.

ಮುಖಂಡ ಇಕ್ಬಾಲ್‌ ಅಹ್ಮದ್‌, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಮೆಹಬೂಬ್‍ಸಾಬ್‌, ಸೈಯದ್‌ ಅಲ್ತಾಫ್‌, ಸಿದ್ದಪ್ಪ, ಸ್ವಾಮಿನಾಥ್‌, ಅರುಣ್‌, ಶಂಕ್ರಯ್ಯ, ಕೃಷ್ಣಮೂರ್ತಿ, ತಿರುಮಲಯ್ಯ, ಜಾಬೀರ್‌ಖಾನ್‌, ಕಣ್ಣನ್, ಮುಬಾರಕ್, ಚಕ್ರಪಾಣಿ, ಪುಟ್ಟರಾಜು, ರಂಗನಾಥ್, ಸಿದ್ದರಾಜು, ರಾಜು, ಚಿರಂಜೀವಿ, ನರಸಿಂಹಮೂರ್ತಿ, ಮಂಜುನಾಥ್, ಮುತ್ತುರಾಜ್‌ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT