ತಿಪಟೂರು: ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತಿಥಿ ಉಪನ್ಯಾಸಕರ ಜೀವನ ಇಂದು ಅಭದ್ರತೆಗೆ ಒಳಗಾಗಿರುವುದು ದುರಂತದ ಸಂಗತಿ ಎಂದು ಅತಿಥಿ ಉಪನ್ಯಾಸಕ ಎಲ್.ಎಂ.ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ನಗರದ ತಿಪಟೂರು ಅತಿಥಿ ಉಪನ್ಯಾಸಕರ ಸಂಘದಿಂದ ಆಯೋಜಿಸಿದ್ದ ಅತಿಥಿ ಉಪನ್ಯಾಸಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಮಾರ್ಚ್ 18ರಿಂದ ಇಲ್ಲಿವರೆಗೆ ಸುಮಾರು 11 ಅತಿಧಿ ಉಪನ್ಯಾಸಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವ ಬಿಡುವ ಸ್ಥಿತಿಗೆ ತಲುಪಿದ್ದಾರೆ. ವೇತನ ನೀಡದೆ, ಜೀತದಾಳುವಿನ ರೀತಿ ದುಡಿಸಿಕೊಳ್ಳುತ್ತಿರವುದು ಶೋಚನೀಯ ಸಂಗತಿ. ಅರ್ಹತೆಯ ಆಧಾರದ ಮೇಲೆ ಸೇವೆಗೆ ಬಂದ ಅತಿಥಿ ಉಪನ್ಯಾಸಕರು ಸುಮಾರು 10 ವರ್ಷಕ್ಕಿಂತಲೂ ಹೆಚ್ಚುಕಾಲ ಸೇವೆಯಲ್ಲಿದ್ದಾರೆ. ಕನಿಷ್ಠ ಉದ್ಯೋಗದ ಭದ್ರತೆ ನೀಡಿ ಸಮಾಜದಲ್ಲಿ ಎಲ್ಲರಂತೆ ಬದುಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಧಾ ಮಾತನಾಡಿ, ‘ತುಮಕೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿ ಶಂಸದುನ್ನೀಸಾ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯ ವೆಚ್ಚವನ್ನು ಭರಿಸಲಾರದೆ ಸಾವಿಗೀಡಾಗಿರುವುದು ನೋವಿನ ಸಂಗತಿ. ಹತ್ತಾರು ವರ್ಷಗಳ ಸೇವೆಗೆ ಕಿಂಚಿತ್ತೂ ಬೆಲೆ ಇಲ್ಲದಿರುವುದು ದುರಂತದ ವಿಷಯ. ಸರ್ಕಾರ ಅವರ ಕುಟುಂಬಗಳಿಗೆ ಸಹಾಯಹಸ್ತ ಚಾಚಬೇಕಿದೆ’ ಎಂದರು.
ಸಂಘದ ಗೌರವಾಧ್ಯಕ್ಷ ಶಿವಣ್ಣ, ಖಜಾಂಚಿ ಜೆ.ಕೆ.ಮಹೇಶ್, ಮೋಹನ್, ಸಂತೋಷ್, ಆಯುಷಾ, ಹೇಮಲತಾ, ಭಾವನಾ, ಸಿದ್ದಲಿಂಗಮೂರ್ತಿ, ಅಶೋಕ ಉಪಸ್ಥಿತರಿದ್ದರು.