ಶಿರಾ: ತಾಲ್ಲೂಕಿನಲ್ಲಿ ಲಾಕ್ಡೌನ್ನಿಂದಾಗಿ ರೈತರು ಬೆಳೆದ ಪಪ್ಪಾಯಿ ಖರೀದಿಸುವವರು ಇಲ್ಲದೆ ಗಿಡದಲ್ಲಿಯೇ ಕೊಳೆಯುವಂತಾಗಿದೆ.
ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಪ್ಪಾಯಿ ಬೆಳೆದಿದ್ದು, ಅದನ್ನು ಮಾರಾಟ ಮಾಡುವುದು ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.
ಪಪ್ಪಾಯಿಯಿಂದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಕೇಳುವರು ಇಲ್ಲದಂತಾಗಿದೆ. ರಂಜಾನ್ ಸಮಯದಲ್ಲಿ ಪಪ್ಪಾಯಿಗೆಉತ್ತಮ ಬೆಲೆ ದೊರೆಯುತ್ತಿತ್ತು. ಆದರೆ ಈ ಬಾರಿ ಪಪ್ಪಾಯಿ ಕೇಳುವವರು ಇಲ್ಲದಂತಾಗಿ.
ಪಪ್ಪಾಯಿ ಬೆಳೆಗೆ ರೈತರು ವ್ಯಯಿಸಿದ್ದ ಹಣವೂ ವಾಪಸ್ ಬರುವುದು ಕಷ್ಟವಾಗಿದೆ. ಪ್ರತಿ ಗಿಡಕ್ಕೆ ಸುಮಾರು ₹150ರಿಂದ ₹200 ಖರ್ಚು ಮಾಡಿ ರೈತರು ಪಪ್ಪಾಯಿ ಬೆಳೆದು ಇಂದು ಸಾಲಗಾರರಾಗುವಂತಾಗಿದೆ. ತೋಟಗಾರಿಕೆ ಇಲಾಖೆಯಿಂದ ಖರೀದಿದಾರರ ಹೆಸರು ಮತ್ತು ಮೊಬೈಲ್ ನಂಬರ್ ಪ್ರಕಟಿಸಿದ್ದರೂ ಅವರು ಖರೀದಿಗೆ ಮುಂದಾಗುತ್ತಿಲ್ಲ. ಒಂದು ವೇಳೆ ಬಂದರೂ 30ರಿಂದ 40 ಕೆಜಿ ಖರೀದಿಸಿ ಉಳಿದಿದ್ದು ಬಿಟ್ಟು ಹೋಗುತ್ತಾರೆ. ಜೊತೆಗೆ ಬೆಲೆ ಸಹ ಕುಸಿದಿದೆ. ರಂಜಾನ್ ಸಮಯದಲ್ಲಿ ಕೆಜಿಗೆ ₹18ರಿಂದ ₹20 ದೊರೆಯುತ್ತಿತ್ತು. ಆದರೀಗ ಕೆಜಿಗೆ ₹7ರಿಂದ ₹8ಕ್ಕೆ ಮಾರಾಟ ಮಾಡಬೇಕಾಗಿದೆ ಎಂದು ಪಪ್ಪಾಯಿ ಬೆಳೆಗಾರ ಷಣ್ಮುಖಪ್ಪ ಬೇಸರ ವ್ಯಕ್ತಪಡಿಸಿದರು.
ಪಪ್ಪಾಯಿ ಹಣ್ಣಾದರೆ ಯಾರು ಖರೀದಿಸುವುದಿಲ್ಲ. ಆದ್ದರಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದು, ಲಾಕ್ಡೌನ್ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ ಸರ್ಕಾರದಿಂದಲೇ ಖರೀದಿಸಿ ಸಾರ್ವಜನಿಕರು ಹಾಗೂ ರೋಗಿಗಳಿಗೆ ವಿತರಿಸಿದರೆ ರೈತರಿಗೆ ಅನುಕೂಲವಾಗುವುದು ಎನ್ನುವುದು ರೈತರ ಒತ್ತಾಯ.