ತುಮಕೂರು: ‘ಶಾಸಕ ರಮೇಶ್ ಜಾರಕಿಹೊಳಿ ಅವರು ಯಾವ ಉದ್ದೇಶಕ್ಕೆ ರಾಜೀನಾಮೆ ನೀಡುತ್ತಾರೋ ಅದು ನನಗೆ ಗೊತ್ತಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನುಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರನ್ನು ಪಕ್ಷವೇ ಸಚಿವರನ್ನಾಗಿ ಮಾಡಿತ್ತು. ನಾನೇ ರಮೇಶ್ ಜೊತೆ ಮಾತನಾಡುತ್ತೇನೆ. ವೈಯಕ್ತಿಕ ಕಾರಣಕ್ಕೆ ಅವರು ರಾಜೀನಾಮೆ ಕೊಡಬಹುದು ಎನಿಸುತ್ತದೆ’ ಎಂದು ಹೇಳಿದರು.
‘ಸತೀಶ್ ಜಾರಕಿಹೊಳಿ ಮತ್ತು ರಮೇಶ್ ನಡುವೆ ಭಿನ್ನಾಭಿಪ್ರಾಯ ಮೊದಲಿನಿಂದಲೂ ಇದೆ. ಸಹೋದರರು ಭಿನ್ನಾಭಿಪ್ರಾಯದ ಬಳಿಕ ಒಗ್ಗೂಡುವುದು ಸಹಜ. ರಮೇಶ್ ಅವರಿಗೆ ಪಕ್ಷದಲ್ಲಿ ಬೇರೆ ಜವಾಬ್ದಾರಿ ಕೊಡಬಹುದು’ ಎಂದರು.
ಈ ರಾಜೀನಾಮೆ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಾತ್ರ ಇಲ್ಲ. ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಸುಮ್ಮನೆ ಹೇಳುತ್ತಾರೆ. ಅವರಲ್ಲಿ ಕೆಲವರು ಸಚಿವರಾಗುವ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಅದು ಆಸೆಯಾಗಿಯೇ ಉಳಿಯುತ್ತದೆ. ಸರ್ಕಾರ ಸುಭದ್ರವಾಗಿದೆ’ ಎಂದು ನುಡಿದರು.