ಪಾವಗಡ: ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಕಡ್ಡಾಯವಾಗಿ ಕನ್ನಡ ಫಲಕ ಅಳವಡಿಸುವಂತೆ ಆಗ್ರಹಿಸಿ ಜಾಗೃತಿ ಜಾಥಾ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಕರವೇ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅನ್ಯ ಭಾಷೆಯಲ್ಲಿ ಅಳವಡಿಸಿರುವ ನಾಮಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕುವಂತೆ ಮನವರಿಕೆ ಮಾಡಿದರು.
ಪಟ್ಟಣದ ವಾಣಿಜ್ಯ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಮಾಲೀಕರಿಗೆ ಇಂಗ್ಲಿಷ್, ತೆಲುಗು, ಹಿಂದಿ ಭಾಷೆಯಲ್ಲಿ ಅಳವಡಿಸಲಾದ ಫಲಕ ತೆರವುಗೊಳಿಸುವಂತೆ ಮನವರಿಕೆ ಮಾಡಿ, ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಒತ್ತಾಯಿಸಿದರು.
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಸಿರಬೇಕು. ಅನ್ಯ ಭಾಷೆಗಳಿಗೆ ಕಡಿಮೆ ಆದ್ಯತೆ ನೀಡಬೇಕು. ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡಬೇಕು. ಕನ್ನಡ ಭಾಷೆ ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಪದಾಧಿಕಾರಿ ಲೋಕೇಶ್ ಪಾಳೆಗಾರ್ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಸಂಗಮ್ ನರಸೀ ಪಾಟೀಲ್, ಪದಾಧಿಕಾರಿಗಳಾದ ಪಾಳೇಗಾರ್ ಲೋಕೇಶ್, ಬೇಕರಿ ನಾಗರಾಜ್, ಮಲ್ಲಿ, ರಂಗಪ್ಪ, ಮಣಿ, ರಾಜು ಪ್ರಶಾಂತ್, ಮಂಜು, ಆಲ್ಕುಂದ್ ರಾಜ್, ಕುಮಾರ್ ಲಚ್ಚಿ ಗೋಪಾಲ್, ಶ್ರೀನಿವಾಸ್, ನಾಗೇಂದ್ರ ಪಾಲ್ಗೊಂಡಿದ್ದರು.