ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ವಲಯಗಳ ಸಂಖ್ಯೆ ಇಳಿಕೆ

Last Updated 4 ಜೂನ್ 2021, 2:43 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ 50
ಕೆಂಪು ವಲಯಗಳ ಸಂಖ್ಯೆ ಕಡಿಮೆಯಾಗಿದೆ.

ಮೇ 25ರಂದು ಕೆಂಪು ವಲಯಗಳ ಸಂಖ್ಯೆ 75 ಇತ್ತು. ಜೂನ್ 2ರಂದು 27ಕ್ಕೆ ಇಳಿದಿದೆ. ಜತೆಗೆ ಹಾಟ್‌ಸ್ಪಾಟ್‍ಗಳ ಸಂಖ್ಯೆಯೂ ಸಹ 240ರಿಂದ 123ಕ್ಕೆ ಇಳಿಕೆಯಾಗಿದೆ.

ಅದೇ ರೀತಿ ಶೇ 48ರಷ್ಟಿದ್ದ ಕೋವಿಡ್ಸೋಂಕಿತರ ಪ್ರಮಾಣ, ಪ್ರಸ್ತುತ ಶೇ 17ಕ್ಕೆ ಇಳಿದಿದೆ. ಪ್ರತಿ ದಿನ 2,500ರಿಂದ 3,000 ವರೆಗೆ ದೃಢವಾಗುತ್ತಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆಯೂ 750– 850ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ 25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಆದರೆ ಜೂನ್ 2ಕ್ಕೆ ಈ ಸಂಖ್ಯೆ 1,242ಕ್ಕೆ ಏರಿಕೆಯಾಗಿದೆ. ಈವರೆಗೂ ಒಂದೇ ಒಂದು ಸೋಂಕಿನ ಪ್ರಕರಣ ದಾಖಲಾಗದ 503 ಗ್ರಾಮಗಳಿವೆ ಎಂದು ಹೇಳಿದ್ದಾರೆ.

ಪರೀಕ್ಷೆ ಹೆಚ್ಚಳ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಸೋಂಕು ದೃಢಪಟ್ಟವರಿಗೆ ತಕ್ಷಣವೇ ಕೋವಿಡ್ ಔಷಧ ಕಿಟ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ನೀಡುವ ಔಷಧಗಳನ್ನು ಹೊರತುಪಡಿಸಿ ಈಗಾಗಲೇ 35 ಸಾವಿರ ಔಷಧಿ ಕಿಟ್ ಸಿದ್ಧಪಡಿಸಿದ್ದು, 31 ಸಾವಿರ ಕಿಟ್ ವಿತರಣೆ ಮಾಡಲಾಗಿದೆ. ವಿವಿಧ ದಾನಿಗಳು ಸಹ ಆಹಾರ ಕಿಟ್‌ಗಳನ್ನು ಸೋಂಕಿತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ವಿತರಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮ: ಮುಂದಿನ ವಾರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಜಿಲ್ಲಾ ಆಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳು ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳ ಸೇವೆಯನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಮತದಾರರ ಗುರುತಿನ ಚೀಟಿ ಬಳಕೆ: ಗ್ರಾಮ ಮಟ್ಟದಲ್ಲಿ ಲಸಿಕೆ ವಿತರಣೆಗೆ ಗ್ರಾಮಲೆಕ್ಕಿಗ, ಪಿಡಿಒಗಳನ್ನು ಅಧಿಕಾರಿ
ಗಳನ್ನಾಗಿ ನೇಮಕ ಮಾಡಲಾಗಿದೆ. ಲಸಿಕೆ ಪೂರೈಕೆಯಾದಾಗ ಗ್ರಾಮದ ಜನರಿಗೆ ಮಾಹಿತಿ ನೀಡಬೇಕು. ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿಸಲು ಜನರನ್ನು ಕರೆತರಬೇಕು. ಗ್ರಾಮಲೆಕ್ಕಿಗರು ಮತದಾರರ ಗುರುತಿನ ಚೀಟಿಯ ಮಾಹಿತಿ ಇಟ್ಟುಕೊಂಡು ಲಸಿಕೆ ಪಡೆಯದವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರಿಗೆ ಒದಗಿಸಲಿದ್ದಾರೆ. ಅವರು ಕರೆತಂದು ಲಸಿಕೆ
ಹಾಕಿಸಲಿದ್ದಾರೆ. ಅದೇ ರೀತಿ ಮಹಾನಗರ ಪಾಲಿಕೆ ಆಯುಕ್ತರು, ನಗರಸಭೆ, ಪುರಸಭೆ ಮುಖ್ಯಾಧಿಕಾರಿಗಳು, ಬಿಲ್ ಕಲೆಕ್ಟರ್ ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ಬಳಸಿಕೊಂಡು ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಲಸಿಕೆ ಗುರಿ: ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 7,51,243 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈಗಾಗಲೇ 3,84,908 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೆ ಮುಂಚೂಣಿ ಕಾರ್ಯಕರ್ತರು, ಇತರೆ ಸಿಬ್ಬಂದಿ ಸೇರಿದಂತೆ 4,50,808 ಮಂದಿಗೆ ಮೊದಲನೇ ಡೋಸ್ ಮತ್ತು 1,15,215 ಎರಡನೇ ಡೋಸ್ ಸೇರಿದಂತೆ ಒಟ್ಟು 5,66,023 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT