ಗುಬ್ಬಿ: ನಿಟ್ಟೂರು ಹೋಬಳಿ ಎನ್.ಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ರಥ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಸುಟ್ಟಿರುವ ರಥ ಹಾಗೂ ತೇರು ಮನೆಗೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಹೋಮ ನಡೆಸಿದರು.
ತೇವಡಿಹಳ್ಳಿ ಮಠದ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸುಟ್ಟ ರಥದ ಭಾಗಗಳನ್ನು ಬಿಚ್ಚಿ ಮಣ್ಣಿನಲ್ಲಿ ಮುಚ್ಚಿ ಸಂಸ್ಕಾರ ಮಾಡಲಾಯಿತು.
ಮಾರ್ಚ್ 20ರಿಂದ ಪ್ರಾರಂಭಗೊಳ್ಳಲಿರುವ ಕಲ್ಲೇಶ್ವರ ಜಾತ್ರೆಯನ್ನು ಧಾರ್ಮಿಕವಾಗಿ ನೆರವೇರಿಸಲು ಮುಂದಾಗಿದ್ದಾರೆ.
ಕಲ್ಲೇಶ್ವರ ಸ್ವಾಮಿ ರಥ ಇಲ್ಲದಿರುವುದರಿಂದ ಗ್ರಾಮದಲ್ಲಿರುವ ಸಿದ್ದಲಿಂಗೇಶ್ವರ ದೇವಾಲಯದ ರಥವನ್ನೇ ಬಳಸಿಕೊಂಡು ಈ ಬಾರಿ ಸಂಪ್ರದಾಯ ಬದ್ಧವಾಗಿ ಜಾತ್ರೆ ನಡೆಸುವೆವು. ಮುಂದಿನ ವರ್ಷದೊಳಗೆ ಅಗತ್ಯ ಕ್ರಮ ಕೈಗೊಂಡು ನೂತನ ರಥ ಮಾಡಿಸಲೇಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದರು.