ತುಮಕೂರು: ‘ಸಂವಿಧಾನದ ಅಡಿಯಲ್ಲಿ ಎಲ್ಲ ಜಾತಿ, ಸಮುದಾಯದ ಜನರಿಗೂ ಸಮಾನವಾಗಿ ಬದುಕುವ ಅವಕಾಶ ಇದೆ’ ಎಂದು ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ನುಡಿದರು.
ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ‘ಭಾರತ ದೇಶದ ಸಂವಿಧಾನ ಮೀಸಲಾತಿ ಒಂದು ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೀಸಲಾತಿ ಬಗ್ಗೆ ಕೆಲವರು ತಪ್ಪು ಅಭಿಪ್ರಾಯಗಳನ್ನು ಕಲ್ಪಿಸುತ್ತಿದ್ದಾರೆ. ಶತಮಾನಗಳಿಂದ ಶೋಷಣೆ ಅನುಭವಿಸಿದ ಕೆಲವು ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿ ವರದಾನವಾಯಿತು ಎಂದರು.
ಹಿರಿಯ ಪತ್ರಕರ್ತ ದೇವರಾಜ್, ‘ಐಎಎಸ್, ಕೆಎಎಸ್ ಪರೀಕ್ಷೆ ಎದುರಿಸಲು ಹೆಚ್ಚು ಪುಸ್ತಕಗಳನ್ನು ಓದಬೇಕು. ಬಿ.ಆರ್ ಅಂಬೇಡ್ಕರ್ ಅವರ ರೀತಿಯಲ್ಲಿ ನೀವು ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವಕಾಶ ಇದ್ದು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಉಪನ್ಯಾಸಕ ಜಿ.ಕೆ.ನಾಗಣ್ಣ, ‘ಸಾಂವಿಧಾನ ಮತ್ತು ಮೀಸಲಾತಿ, ಉಳಿಸಿಕೊಳ್ಳುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ’ ಎಂದರು. ಜೆ.ಸಿ ರಂಗಧಾಮಯ್ಯ ಮಾತನಾಡಿದರು. ಶ್ರೀನಿವಾಸ, ಶಂಕರ್, ಸುಧಾ ಇದ್ದರು.