ಶಿರಾ: ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ವಸತಿ ಶಾಲೆ ಪ್ರಾರಂಭಿಸುವ ಬದಲು ಬೇರೆ ಕಡೆ ಆರಂಭಿಸಿ ಎಂದು ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಆಗ್ರಹಿಸಿದರು.
ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪರಿಸರ ಉಳಿಸಿ ಆಂದೋಲನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಮರಡಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಇಲ್ಲಿಗೆ ಜಾತ್ಯತೀತವಾಗಿ ಭಕ್ತರು ಬರುತ್ತಿದ್ದು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ, ದೇವಸ್ಥಾನದ ತಪ್ಪಲಿನಲ್ಲಿ 10 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲು ಭೂಮಿಪೂಜೆ ನಡೆಸಲಾಗಿದೆ. ಇಲ್ಲಿ ವಸತಿ ಶಾಲೆ ನಿರ್ಮಾಣ ಮಾಡಿದರೆ ಭಕ್ತರಿಗೆ ತೊಂದರೆ ಆಗಲಿದೆ. ಜಾತ್ರೆ ಸಮಯದಲ್ಲಿ ವಾಹನ ನಿಲುಗಡೆ, ಊಟದ ವ್ಯವಸ್ಥೆಗೆ ತೊಂದರೆ ಆಗಲಿದೆ. ಆದ್ದರಿಂದ ದೇವಸ್ಥಾನದ ತಪ್ಪಲಿನಲ್ಲಿ ಈ ಯೋಜನೆಯನ್ನು ರೂಪಿಸಬಾರದು’ ಎಂದು ಒತ್ತಾಯಿಸಿದರು.
ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲು ನಾವು ವಿರೋಧಿಸುತ್ತಿಲ್ಲ. ದೇವಸ್ಥಾನದ ತಪ್ಪಲನ್ನು ಬಿಟ್ಟು ಬೇರೆ ಕಡೆ ಪ್ರಾರಂಭಿಸಿ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮರಡಿಗುಡ್ಡ ಪ್ರಕೃತಿ ನೀಡಿರುವ ಕೊಡುಗೆ. ಇಲ್ಲಿನ ಪರಿಸರ ಆಹ್ಲಾದಕರವಾಗಿದೆ. ಇಲ್ಲಿ ಇನ್ನಷ್ಟು ಸಸಿಗಳನ್ನು ಬೆಳೆಸಿದರೆ ಇನ್ನೂ ಸುಂದರವಾಗಲಿದೆ. ಅದನ್ನು ಬಿಟ್ಟು ಗುಡ್ಡ ಕಡಿದು ವಸತಿ ಶಾಲೆ ನಿರ್ಮಾಣ ಮಾಡಿದರೆ ಅನಾಹುತಗಳು ತಪ್ಪಿದ್ದಲ್ಲ ಎಂದು ಹೇಳಿದರು.
ದೇವಸ್ಥಾನ ಸಮಿತಿಯ ಧರ್ಮದರ್ಶಿ ಕಾಂತರಾಜು, ಸಾಣೇಹಳ್ಳಿ ನಾರಾಯಣ್, ಕಠಾವೀರನಹಳ್ಳಿ ರಾಮಕೃಷ್ಣ, ಬಿ.ಆರ್.ರಾಜು, ಸಣ್ಣರಂಗಪ್ಪ, ಯೋಗೀಶ್ ಇದ್ದರು.