ಕುಣಿಗಲ್: ಪಟ್ಟಣದ ಹೃದಯ ಭಾಗವಾದ ಗ್ರಾಮ ದೇವತಾ ವೃತ್ತದ ಮಳಿಗೆಯ ಮಾಲೀಕರೊಬ್ಬರು ಮುಖ್ಯರಸ್ತೆಯಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಸ್ಥಳೀಯ ಆಡಳಿತ ಮೌನವಹಿಸಿರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ ಭಾಗದಲ್ಲಿ ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳನ್ನು ಅಂಗವಿಕಲರು ಅಂಗಲಾಚಿದರೂ ಬಿಡದೆ ಜೆಸಿಬಿ ಬಳಸಿ ಪುರಸಭೆ ಅಧಿಕಾರಿಗಳು ತೆರವು ಮಾಡಿದ್ದರು. ಹಣಬಲವುಳ್ಳ ಮಳಿಗೆ ಮಾಲೀಕರಿಗೆ ಮೂರು ಅಂತಸ್ತಿನ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿದ್ದಾರೆ.
ತುಮಕೂರು- ಮೈಸೂರು ಕಡೆ ಸಂಚರಿಸುವ ವಾಹನಗಳ ಕೇಂದ್ರ ಸ್ಥಾನವಾಗಿರುವ ಗ್ರಾಮದೇವತಾ ವೃತ್ತದಲ್ಲಿ ರಸ್ತೆಗೆ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಮೌನವಹಿಸಿದ್ದಾರೆ.
ಪುರಸಭೆಯಲ್ಲಿ ಬಡವರಿಗೊಂದು ನೀತಿ, ಹಣಬಲವುಳ್ಳವರಿಗೇ ಒಂದು ನೀತಿಯಾಗಿದೆ. ಸಂಬಂಧಪಟ್ಟವರು ಗಮನ ಹರಿಸಿ ತೆರವುಗೊಳಿಸಬೇಕು ಎಂದು ರೇವಣ್ಣ, ಚಂದ್ರಣ್ಣ ಮನವಿ ಮಾಡಿದ್ದಾರೆ.