ತುಮಕೂರು: ಚೆನ್ನೈನ ಡಾ.ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ಸೂಚನೆ ಮೇರೆಗೆ ಮಂಗಳವಾರ ಅವರು ದ್ರವ ರೂಪದ ಆಹಾರ ಕೊಡಲಾಗಿದೆ.
ಶಸ್ತ್ರ ಚಿಕಿತ್ಸೆ ಬಳಿಕ ದಿನದಿಂದ ದಿನಕ್ಕೆ ಸಾಕಷ್ಟು ಚೇತರಿಕೆ ಕಂಡಿದೆ. ಬುಧವಾರ ಬೆಳಿಗ್ಗೆ 11 ಗಂಟೆ ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
‘ಸ್ವಾಮೀಜಿ ಅವರು ಎಂದಿನಂತೆಯೇ ಇಷ್ಟಲಿಂಗ ಪೂಜೆ ಮಾಡುವ ಇಂಗಿತವನ್ನು ಮಂಗಳವಾರ ಬೆಳಿಗ್ಗೆಯೂ ವ್ಯಕ್ತಪಡಿಸಿದರು’ ಎಂದು ಮಠದ ಮೂಲಗಳು ತಿಳಿಸಿವೆ.
ಭೇಟಿ: ನಾಡಿನ ವಿವಿಧ ಕಡೆಯ ಅನೇಕ ಭಕ್ತರು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಮಂಗಳವಾರವೂ ಆಸ್ಪತ್ರೆಗೆ ತೆರಳಿದ್ದರು. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ತುಮಕೂರಿನ ಬಿಜೆಪಿ ಹಿರಿಯ ಮುಖಂಡ ಜಿ.ಎಸ್. ಬಸವರಾಜ್ ಅವರೊಬ್ಬರಿಗೆ ಮಾತ್ರ ಆಸ್ಪತ್ರೆಯವರು ಅವಕಾಶ ನೀಡಿದ್ದರು.
ಆಸ್ಪತ್ರೆಗೆ ತೆರಳಿದ ಕಿರಿಯ ಶ್ರೀ: ಸೋಮವಾರ ಸಿದ್ಧಗಂಗಾಮಠಕ್ಕೆ ಬಂದಿದ್ದ ಕಿರಿಯಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಂಗಳವಾರ ರೇಲಾ ಆಸ್ಪತ್ರೆಗೆ ಮರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.