ಕೊರಟಗೆರೆ: ತಾಲ್ಲೂಕಿನ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬಿಸಿಲಿನ ಬೇಗೆಗೆ ಬಸವಳಿಯುವ ಪ್ರಾಣಿ, ಪಕ್ಷಿಗಳ ದಾಹ ಇಂಗಿಸಲು ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಸಿದ್ದರಬೆಟ್ಟ ಸಸ್ಯಕಾಶಿ ಎಂದೇ ಹೆಸರು ಗಳಿಸಿದೆ. ಸಾವಿರಾರು ಬಗೆಯ ಗಿಡಗಳು ಇಲ್ಲಿವೆ. ಇದು ವಿವಿಧ ಪಕ್ಷಿ, ಪ್ರಾಣಿಗಳ ಆಶ್ರಯ ತಾಣವೂ ಹೌದು. ಜಿಂಕೆ, ಕಡವೆ, ಕರಡಿ, ಚಿರತೆ, ಕೋತಿಗಳು ಅಪಾರ ಸಂಖ್ಯೆಯಲ್ಲಿವೆ.
ಮಳೆಗಾಲದಲ್ಲಿ ಬೆಟ್ಟದ ತುದಿ ಸೇರಿದಂತೆ ತಪ್ಪಲಿನ ಅಲ್ಲಲ್ಲಿ ಕಟ್ಟೆ, ಕುಂಟೆಗಳಲ್ಲಿ ಮಳೆ ನೀರು ಸಂಗ್ರಹವಾಗುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಪ್ರಾಣಿಗಳಿಗೆ ನೀರಿನ ಅಭಾವ ಕಂಡು ಬರುತ್ತದೆ. ಹಾಗಾಗಿ ರಂಭಾಪುರಿ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶ ಸೇರಿದಂತೆ ಬೆಟ್ಟದ ಮೇಲ್ಭಾಗದಲ್ಲಿ ನಿತ್ಯ ನೀರು ಇಡುತ್ತಿದ್ದಾರೆ. ಕಾಡಿನ ಅಲ್ಲಲ್ಲಿ ಸಣ್ಣ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ನಿತ್ಯ ಟ್ಯಾಂಕರ್ ಮೂಲಕ ಆ ತೊಟ್ಟಿಗಳಿಗೆ ನೀರು ತುಂಬಿಸುತ್ತಿದ್ದಾರೆ.
‘ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಇಲ್ಲಿ ವಾಸವಾಗಿವೆ. ಬೇಸಿಗೆ ಕುಡಿಯುವ ನೀರು ದೊರೆಯದೆ ಅನೇಕ ಜೀವಿಗಳು ಮೃತಪಡುತ್ತಿದ್ದವು. ಹಾಗಾಗಿ ಮಳೆಗಾಲ ಪ್ರಾರಂಭವಾಗುವವರಗೆ ಸಾಕಾಗುವಷ್ಟು ನೀರನ್ನು ನಿತ್ಯ ಅರಣ್ಯ ಪ್ರದೇಶದ ಅಲ್ಲಲ್ಲಿ ಸಂಗ್ರಹಿಸಿಡುತ್ತಿದ್ದೇವೆ. ಪ್ರಾಣಿ, ಪಕ್ಷಿಗಳು ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತವೆ’ ಎನ್ನುತ್ತಾರೆ ವೀರಭದ್ರ ಶಿವಾಚಾರ್ಯ ಸ್ವಾಮೀಜಿ.