ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌನ ಮುರಿದು ಕ್ರಮ ಕೈಗೊಳ್ಳಿ’

Last Updated 16 ಅಕ್ಟೋಬರ್ 2021, 3:05 IST
ಅಕ್ಷರ ಗಾತ್ರ

ತುಮಕೂರು: ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರ ಪುತ್ರನೇ ರೈತರನ್ನು ಹತ್ಯೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿದು ಮೃತ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ಕರೆಯಂತೆ ನಗರದ ಬಿಜಿಎಸ್ ವೃತ್ತದಲ್ಲಿ ರೈತ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಹುತಾತ್ಮರಾದ ರೈತ ಕುಟುಂಬಗಳಿಗೆ ಪರಿಹಾರ, ಸರ್ಕಾರಿ ನೌಕರಿ ನೀಡಬೇಕು. ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಮೋರ್ಚಾ ಜಿಲ್ಲಾ ಸಂಚಾಲಕ ಸಿ.ಯತಿರಾಜು, ‘ರೈತ ಚಳವಳಿ ಹತ್ತಿಕ್ಕುವ ಭಾಗವಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರೇ ಪ್ರಚೋದನೆ ನೀಡಿದ್ದಾರೆ. ಪ್ರತಿಭಟಿಸುವವರಿಗೆ ಗತಿ ಕಾಣಿಸುತ್ತೇನೆ ಎಂದು ಸಚಿವರು ಎಚ್ಚರಿಕೆ ಕೊಟ್ಟ ಸಂದರ್ಭದಲ್ಲೇ ಅವರ ಮಗನಿಂದ ಚಳವಳಿಗಾರರ ಮೇಲೆ ವಾಹನ ಹತ್ತಿಸಿ, ಹತ್ಯೆ ಮಾಡಲಾಗಿದೆ. ಇಂತಹ ಪ್ರಚೋದನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರ, ಹರಿಯಾಣ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ರೈತರನ್ನು ಅವಮಾನಿಸುವುದು, ಹಿಂಸಿಸುವುದನ್ನು ತಕ್ಷಣ ನಿಲ್ಲಿಸಬೇಕು. ಅನ್ನದಾತರನ್ನು ಕೊಂದ ಸರ್ಕಾರವನ್ನು ಅಧಿಕಾರದಿಂದ ಜನತೆ ಕಿತ್ತೊಗೆಯಬೇಕು’ ಎಂದು ಹೇಳಿದರು.

ಮಹಿಳಾ ಮುಖಂಡರಾದ ಕಲ್ಯಾಣಿ, ಬಲಿಷ್ಠ ಹೋರಾಟದ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು.

ಪ್ರಗತಿಪರ ಸಂಘಟನೆಗಳ ಪರವಾಗಿ ಮಾತನಾಡಿದ ತಾಜುದ್ದೀನ್, ‘ಬ್ರಿಟಿಷರು ಅಧಿಕಾರ ಉಳಿಸಿಕೊಳ್ಳಲು ಜಲಿಯಾನ್‌ ವಾಲ್‍ಬಾಗ್‌ನಲ್ಲಿ ದಾಳಿ ಮಾಡಿ ಜನರನ್ನು ಹತ್ಯೆ ಮಾಡಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರ ರಕ್ಷಿಸಿಕೊಳ್ಳಲು ಅದೇ ಮಾದರಿಯಲ್ಲಿದಾಳಿ ಮಾಡುವ ಮೂಲಕ ನೀಚ ಕೃತ್ಯಕ್ಕೆ ಇಳಿದಿದೆ’ ಎಂದು ಖಂಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ರಾಜ್ಯ ರೈತ ಸಂಘದ ರವೀಶ್, ರೈತ ಮುಖಂಡ ಬಸವರಾಜು, ಎಐಟಿಯುಸಿ ಗಿರೀಶ್, ಸಿಐಟಿಯು ಎನ್.ಕೆ.ಸುಬ್ರಹ್ಮಣ್ಯ, ಎಐಟಿಯುಯುಸಿ ಮಂಜುಳ ಮಾತನಾಡಿದರು. ಜನಾಂದೋಲನ ಸಂಘಟನೆಯ ಪಂಡಿತ್ ಜವಾಹರ್, ಸೈಯದ್ ಮುಜೀಬ್, ವಕೀಲರಾದ ತಿಮ್ಮೇಗೌಡ, ವಿದ್ಯಾರ್ಥಿ ಮುಖಂಡರಾದ ಅಶ್ವಿನಿ, ಕಟ್ಟಡ ಕಾರ್ಮಿಕರ ಸಂಘದ ಇಬ್ರಾಹಿಂ ಖಲೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT