ಪಾವಗಡ: ಕೋವಿಡ್– 19 ಸಂಕಷ್ಟ ಕಾಲದಲ್ಲಿಯೂ ಹೈನುಗಾರಿಕೆ ರೈತರಿಗೆ ಆಸರೆಯಾಗಿದೆ ಎಂದು ತುಮುಲ್ ನಿರ್ದೇಶಕ ಚನ್ನಮಲ್ಲಯ್ಯ ತಿಳಿಸಿದರು.
ಪಟ್ಟಣದಲ್ಲಿ ತುಮುಲ್ ಆಯೋಜಿಸಿದ್ದ ಹಾಲು ಉತ್ಪಾದಕರ ಮಕ್ಕಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿರುವವರು ಅಕಾಲ ಮರಣ ಹೊಂದಿದರೆ ತುಮುಲ್ನಿಂದ ₹50 ಸಾವಿರ ಪರಿಹಾರ ಧನ ವಿತರಿಸಲಾಗುತ್ತಿದೆ. ರಾಸು ಮರಣ ಹೊಂದಿದರೆ ₹10 ಸಾವಿರ ಕೊಡಲಾಗುತ್ತಿದೆ. ಜೊತೆಗೆ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ, ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕೋವಿಡ್ ಸಂಕಷ್ಟದಿಂದ ತುಮುಲ್ ನಷ್ಟಕ್ಕೀಡಾಗಿತ್ತು. ಆದರೆ ರೈತರ ಅನುಕೂಲಕ್ಕೆ ಅಗತ್ಯ ಸೌಕರ್ಯ ಮುಂದುವರೆಸುವ ಮೂಲಕ ಅವರಿಗೆ ಅಗತ್ಯ ಸಹಕಾರ ನೀಡಲಾಗಿತ್ತು. ಇದೀಗ ಕೋವಿಡ್ ಸಮಸ್ಯೆ ಇಳಿಮುಖವಾಗಿದ್ದು, ತುಮುಲ್ ನಷ್ಟದಿಂದ ಚೇತರಿಸಿಕೊಳ್ಳುತ್ತಿದೆ ಎಂದರು.
ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸಲಾಯಿತು. ಡೈರಿ, ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ತುಮುಲ್ ತಾಲ್ಲೂಕು ಮುಖ್ಯಸ್ಥ ಡಿ.ದಿಲೀಪ್, ವಿಸ್ತರಣಾಧಿಕಾರಿ ಸುನಿತಾ,ಪಶು ವೈದ್ಯಾಧಿಕಾರಿ ಡಾ. ಆದರ್ಶ್, ಮಾಜಿ ನಿರ್ದೇಶಕ ವೇಣುಗೋಪಾಲರೆಡ್ಡಿ ಉಪಸ್ಥಿತರಿದ್ದರು.