ತುಮಕೂರು: ತುಮಕೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗಂಗಾಂಜನೇಯ ಅವರು ರಾಜೀನಾಮೆ ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. 50 ತಿಂಗಳಿನಿಂದ ಗಂಗಾಂಜನೇಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಅಧ್ಯಕ್ಷ ಸ್ಥಾನವನ್ನು ಪಕ್ಷದ ಇತರೆ ಸದಸ್ಯರಿಗೂ ನೀಡಬೇಕು ಎನ್ನುವ ಒತ್ತಡದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕವಿತಾ ರಮೇಶ್ ಮತ್ತು ಸುಧಾ ಅವರ ಹೆಸರುಗಳು ಚಾಲ್ತಿಯಲ್ಲಿ ಇವೆ.
‘ಬಿ.ಸುರೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವ ತೃಪ್ತಿ ನನಗೆ ಇದೆ. ಪಕ್ಷ ರಾಜೀನಾಮೆ ನೀಡುವಂತೆ ಹೇಳಿತು. ಆ ಪ್ರಕಾರ ನಡೆದುಕೊಂಡಿದ್ದೇನೆ’ ಎಂದು ಗಂಗಾಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ಎರಡು ದಿನಗಳ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಸುರೇಶ್ ಗೌಡರೇ ಎರಡು ದಿನ ತಡಿ ಎಂದಿದ್ದರು’ ಎಂದು ಹೇಳಿದರು.