ಪಾವಗಡ: ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರ ದೇಗುಲಕ್ಕೆ ಬಂದಿದ್ದ ಭಕ್ತರು, ದೇವಾಲಯ ಪ್ರವೇಶ ನಿಷೇಧಿಸಿದ್ದ ಕಾರಣ ರಸ್ತೆ ವಿಭಜಕಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.
ಕೋವಿಡ್ ಮೂರನೆ ಅಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ 144 ಸೆಕ್ಷನ್ ವಿಧಿಸಿ ಶನಿವಾರ, ಭಾನುವಾರ, ಸೋಮವಾರ, ಸರ್ಕಾರಿ ರಜಾ ದಿನ ಹಾಗೂ ವಿಶೇಷ ದಿನಗಳಂದು ದೇಗುಲ ಪ್ರವೇಶ ನಿಷೇಧಿಸಿರುವುದರಿಂದ ಪಟ್ಟಣದ ಶನೈಶ್ಚರ ದೇಗುಲದ ಬಾಗಿಲು ಮುಚ್ಚಲಾಗಿತ್ತು.
ವಿಷಯ ತಿಳಿಯದೆ ಆಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ಶನೈಶ್ಚರ ದೇಗುಲದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದರಿಂದ ರಸ್ತೆ ವಿಭಜಕದ ಬಳಿ ಫೋಟೊ ಇರಿಸಿ ವಿಭಜಕಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.
ಸುಮಾರು 50 ಮೀಟರ್ ದೂರದಿಂದ ಭಕ್ತರು ದೇಗುಲದ ಗೋಪುರಕ್ಕೆ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಸತಿ ಗೃಹದಲ್ಲಿ ಕೊಠಡಿ ನೀಡದ ಕಾರಣ ಭಕ್ತರು ಪಟ್ಟಣದ ಶೌಚಾಲಯ, ಹೊರ ವಲಯದ ಕಣಿವೆ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲದ ಬಳಿ ಸ್ನಾನ ಮಾಡಿ, ಅಲ್ಲಿಯೇ ಆಹಾರ ಸೇವಿಸಿದರು.
ದೇವಾಲಯದಲ್ಲಿ ಪ್ರಸಾದ ವಿತರಣೆ ಸ್ಥಗಿತಗೊಳಿಸಲಾಗಿತ್ತು. ರಸ್ತೆಗಳು ವಾಹನ, ಜನರಿಂದ ತುಂಬಿತ್ತು. ವಾರದ ಮುನ್ನವೇ ದರ್ಶನ ನಿಷೇಧಿಸುವ ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದರೆ ಜನರಿಗಾದ ನಿರಾಶೆ ತಪ್ಪಿಸಬಹುದಿತ್ತು ಎಂದು ನೂರಾರು ಕಿ.ಮೀ. ದೂರದಿಂದ ಬಂದಿದ್ದ ಭಕ್ತರು ಹೇಳಿದರು.