ಪಾವಗಡ: ಪಟ್ಟಣದಲ್ಲಿ ಶನಿವಾರ ಮೂರು ನ್ಯಾಯಾಲಯಗಳ ಪ್ರಕರಣಗಳನ್ನು ಒಬ್ಬ ನ್ಯಾಯಾಧೀಶರು ರಾತ್ರಿ 7.30ರವರೆಗೆ ಬಗೆಹರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಪ್ರಧಾನ ಸಿವಿಲ್ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳ ನ್ಯಾಯಾಧೀಶರು ವರ್ಗಾವಣೆ ಆಗಿರುವ ಹಿನ್ನೆಲೆ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದ್ದವು.
ಮೂರು ನ್ಯಾಯಾಲಯಗಳ ಪೈಕಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಹರಿಣಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕ ಅದಾಲತ್ ಹಿನ್ನೆಲೆ ಸಾವಿರಾರು ಮಂದಿ ಕಕ್ಷಿದಾರರು, ವಕೀಲರಿಂದ ನ್ಯಾಯಾಲಯದ ಆವರಣ ತುಂಬಿತ್ತು.
ನ್ಯಾಯಾಧೀಶೆ ಎಂ.ಎಸ್. ಹರಿಣಿ ಅವರು ಬೆಳಿಗ್ಗೆಯಿಂದಲೇ ಲೋಕ ಅದಾಲತ್ ಆರಂಭಿಸಿ ಹಂತಹಂತವಾಗಿ ಮೂರು ನ್ಯಾಯಾಲಯಗಳ 337 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಲಯದ 190, ಪ್ರಧಾನ ಸಿವಿಲ್ ನ್ಯಾಯಾಲಯದ 92, ಹೆಚ್ಚುವರಿ ಸಿವಿಲ್ ನ್ಯಾಯಾಲಯದ 55 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.