ತುಮಕೂರು: ನಗರಕ್ಕೆ ನೀರು ಪೂರೈಸುವ ಪ್ರಮುಖ ಜಲಸಂಗ್ರಹಾಗಾರ ಬುಗಡನಹಳ್ಳಿ ಕೆರೆಗೆ ಸೋಮವಾರ ಬೆಳಿಗ್ಗೆ ಹೇಮಾವತಿ ನೀರು ತಲುಪಿತು.
‘ಕೆರೆಯಲ್ಲಿದ್ದ ನೀರು ಖಾಲಿಯಾಗಿತ್ತು. ಪ್ರಸ್ತುತ ಕೆಸರು ನೀರನ್ನು ಶುದ್ಧೀಕರಿಸಿ ನಾಗರಿಕರಿಗೆ ಸರಬರಾಜು ಮಾಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ನಾಗರಿಕರಿಗೆ ಯಾವ ರೀತಿ ನೀರನ್ನು ಪೂರೈಸುವುದು ಎಂಬ ಆತಂಕ ನಮ್ಮದಾಗಿತ್ತು. ಈಗ ನೀರು ಹರಿದಿರುವುದು ಸಂತಸ ತಂದಿದೆ’ ಎಂದು ಸ್ಥಳಕ್ಕೆ ಭೇಟಿನೀಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹೇಳಿದರು.
‘ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದನೆ ಸಿಕ್ಕಿದೆ. ಯಡಿಯೂರಪ್ಪ ಅವರಿಗೆ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಈ ಕಾರಣದಿಂದ ಅವರು ನುಡಿದಂತೆ ನಡೆದಿದ್ದಾರೆ’ ಎಂದರು.
ಬುಗಡನಹಳ್ಳಿ ಕೆರೆಗೆ ನೀರು ಬರಲು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಬಿ.ಸಿ.ನಾಗೇಶ್, ಮಸಾಲ ಜಯರಾಂ ಹಾಗೂ ಜಿಲ್ಲೆಯ ಎಲ್ಲ ಶಾಸಕರನ್ನು ಅಭಿನಂದಿಸುವುದಾಗಿ ತಿಳಿಸಿದರು.