ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ಪೊಲೀಸರು ನಿಗಾ ಇಡಬೇಕು. ಚುನಾವಣಾಧಿಕಾರಿ ತನಿಖೆ ನಡೆಸಬೇಕು. ದೇವಾಲಯಗಳ ಕಟ್ಟಡಗಳ ಅಭಿವೃದ್ಧಿಗೆ ಹಣ ಕೊಟ್ಟು ಆಯ್ಕೆಯಾಗಿರುವ ವದಂತಿ ಜಾಸ್ತಿ ಇದ್ದು ಅಂತಹವರ ವಿರುದ್ಧ ಗೂಂಡಾ ಕಾಯ್ದೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಗ್ರಾಮಗಳ ಜನರ ಮೇಲೆ ಒತ್ತಡ ಹೇರಿ ಕೆಲವರು ಆಯ್ಕೆ ಆಗಿರಬಹುದು. ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸದಸ್ಯರ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ, ಅವಿರೋಧ ಆಯ್ಕೆಗಳು ಸಾಕಷ್ಟು ಕಡೆ ನಡೆದಿದೆ. ದೇವಾಲಯಗಳ ಅಭಿವೃದ್ಧಿ ಹೆಸರಿನಲ್ಲಿ ಹಣ ಪಡೆದು ಕೆಲವು ಕಡೆ ಅವಿರೋಧ ಆಯ್ಕೆ ನಡೆದಿದೆ.
ದೇವಾಲಯ ಅಭಿವೃದ್ಧಿ ಮಂಡಳಿ ಸದಸ್ಯರು ಹಣ ಪಡೆದಿದ್ದಾರೆ. ಅಂತಹವರ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಬೇಕು. ದೇವಾಲಯಕ್ಕೆ ಹಣ ಕೊಟ್ಟು ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಸದಸ್ಯತ್ವ ರದ್ದುಮಾಡಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿ ಗಡಿಪಾರು ಮಾಡಬೇಕು ಎಂದು ಕೋರಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ಮುಖಂಡರಾದ ಎಚ್.ಬಿ.ರಾಜೇ, ಸೈಯ್ಯದ್ ಅಲ್ತಾಫ್, ಎನ್.ಕೆ.ನಿಧಿಕುಮಾರ್, ಯೋಗೀಶ್ ಮೆಳೇಕಲ್ಲಹಳ್ಳಿ, ನಂಜುಂಡಪ್ಪ, ತಾಜ್ ಉದ್ದೀನ್ ಷರೀಪ್, ರಂಗನಾಥ, ಕೆ.ಶಿವರಾಜ್, ಕೌತಮಾರನಹಳಿ ಆನಂದ್ ಇದ್ದರು.