ತುಮಕೂರು: ಕೋವಿಡ್ ನಿಯಂತ್ರಿಸಲು 18ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ ನೀಡಿದರು.
ಮಂಚೂಣಿ ಕಾರ್ಯಕರ್ತರ ಇಲಾಖೆಗಳ ಮುಖ್ಯಸ್ಥರೊಂದಿಗೆ ಶುಕ್ರವಾರ ಸಭೆ ನಡೆಸಿದರು. ಕೋವಿಡ್ ನಿಗ್ರಹಕ್ಕೆಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರು ನೋಡೆಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬೇಕು. ನಿಗದಿಪಡಿಸಿದ ದಿನದಂದು ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮೇ 22ರಂದು ಅಂಗವಿಕಲರು, ಕೈದಿಗಳು, ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತದೆ. ಉಳಿದಂತೆ ಮೇ 23ರಿಂದ 25ರವರೆಗೆ ಲಸಿಕೆ ಲಭ್ಯತೆ ನೋಡಿಕೊಂಡು ನೀಡಲಾಗುತ್ತದೆ.
ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಕೋವಿಡ್ ಕರ್ತವ್ಯಕ್ಕೆ ನಿಯೋಜಿತ ಶಿಕ್ಷಕರು, ಸಾರಿಗೆ ಸಿಬ್ಬಂದಿ, ಆಟೊ, ಕ್ಯಾಬ್ ಚಾಲಕರು, ವಿದ್ಯುತ್, ನೀರು ಸರಬರಾಜುದಾರರು, ಅಂಚೆ ಇಲಾಖೆ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು, ಭದ್ರತೆ, ಕಚೇರಿಗಳ ಹೌಸ್ ಕೀಪಿಂಗ್, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವವರು, ಅನಿಲ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್, ಕರ್ಮಚಾರಿ ಒಳಗೊಂಡಂತೆ), ಔಷಧಿ ತಯಾರಿಸುವ ಕಂಪನಿ ಸಿಬ್ಬಂದಿ, ಆಸ್ಪತ್ರೆಗಳಿಗೆ ಆಮ್ಲಜನಕ, ಔಷಧಿ, ವೈದ್ಯಕೀಯ ಉಪಕರಣ ಸರಬರಾಜು ಮಾಡುವವರು, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳಿಗೆ ಲಸಿಕೆ ನೀಡಬಹುದಾಗಿದೆ.
ಎಪಿಎಂಸಿ ಕೆಲಸಗಾರರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ಟೆಲಿಕಾಮ್, ಇಂಟರ್ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಕೆಲಸಗಾರರು, ಚಿತ್ರೋದ್ಯಮದ, ವಕೀಲರು, ಹೋಟೆಲ್, ಕೆಎಂಎಫ್, ರೈಲ್ವೆ, ಗಾರ್ಮೆಂಟ್ಸ್ ಕಾರ್ಖಾನೆ, ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಮಹಿಳಾ ನಿಲಯ ವಾಸಿಗಳು, ಎಚ್ಎಎಲ್ ಸಿಬ್ಬಂದಿಗೆ ಲಸಿಕೆ ಕೊಡಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.