ತುಮಕೂರು: ನಗರದಲ್ಲಿ ಸದ್ಯಕ್ಕೆ ನೀರಿಗೆ ಹಾಹಾಕಾರ ತಪ್ಪಲಿದೆ. ಜನರ ದಾಹ ತಣಿಸುತ್ತಿದ್ದ ಬುಗುಡನಹಳ್ಳಿ ಕೆರೆ ಶೀಘ್ರ ಭರ್ತಿಯಾಗಲಿದೆ. ಬರಿದಾಗಿದ್ದ ಕೆರೆ ಒಡಲು ತುಂಬಿಕೊಳ್ಳುತ್ತಿದೆ.
ಹೇಮಾವತಿ ನದಿಯ ಗೊರೂರು ಜಲಾಶಯದಿಂದ ಎರಡು ದಿನಗಳ ಹಿಂದೆ ನೀರು ಹೊರಬಿಟ್ಟಿದ್ದು, ಸೋಮವಾರ ರಾತ್ರಿ ಕೆರೆ ತಲುಪಿದೆ. ಸದ್ಯಕ್ಕೆ ನಗರದ ಜನತೆ ದೊಡ್ಡ ಸಮಸ್ಯೆಯಿಂದ ಪರಾಗಿದ್ದಾರೆ. ಮೇ ತಿಂಗಳಲ್ಲಿ ಹೇಮಾವತಿಯಿಂದ ನೀರು ಹರಿಸಿದ ಉದಾಹರಣೆಗಳಿಲ್ಲ. ಇದೇ ಮೊದಲ ಬಾರಿಗೆ ಮೇನಲ್ಲಿ ಕೆರೆಗೆ ನೀರು ಹರಿದು ಬಂದಿದೆ.
ಕೆರೆಯ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 246 ಎಂಸಿಎಫ್ಟಿ. ಈಗಾಗಲೇ, ಬಹುತೇಕ ನೀರು ಖಾಲಿಯಾಗಿತ್ತು. ಬೇಸಿಗೆಯಲ್ಲಿ ಬೇಡಿಕೆಯೂ ಹೆಚ್ಚಾಗಿದ್ದು, ಲಾಕ್ ಡೌನ್ನಿಂದ ಜನರು ಮನೆಯಲ್ಲೇ ಇರುವುದರಿಂದ ನೀರಿನ ಬಳಕೆಯೂ ಅಧಿಕವಾಗಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಪೂರೈಕೆ ಕಷ್ಟಕರವಾಗಿತ್ತು.
ಮೈದಾಳ ಕೆರೆಯಲ್ಲಿ ಸಂಗ್ರಹ ವಾಗಿದ್ದ ಮಳೆ ನೀರನ್ನು ಸಂಸ್ಕರಿಸಿ ಬಿಡಲಾಗುತ್ತಿದೆ. ಸರಿಯಾಗಿ ಸಂಸ್ಕರಣೆಯಾಗದೆ ನೀರಿನ ಜತೆಗೆ ಬಗ್ಗುಡವೂ ಬರುತ್ತಿದ್ದು, ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿತ್ತು.