ಕಾರ್ಕಳ: ಇಲ್ಲಿನ ಜನರಲ್ಲಿ ಕೆಲ ದಿನಗಳಿಂದ ಆತಂಕ ಮೂಡಿಸಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಮಂಗಳವಾರ ಸೆರೆ ಹಿಡಿದರು.
ಅನಂತಶಯನದ ತೆಳ್ಳಾರು ರಸ್ತೆಯ ವಕೀಲರ ಮನೆಯೊಂದರ ಬಳಿ ತಿರುಗಾಡುತ್ತಿದ್ದ ಕಾಳಿಂಗ ಸರ್ಪದ ಕುರಿತು ಪುರಸಭಾ ಸದಸ್ಯ ಶುಭದ ರಾವ್ ಅವರ ಗಮನಕ್ಕೆ ತಂದಿದ್ದು, ಅವರು ಅನಿಲ್ ಪ್ರಭು ಅವರನ್ನು ಸಂಪರ್ಕಿಸಿದರು.
ಶುಭದ ರಾವ್ ಮಾತನಾಡಿ, ‘ಅನೇಕ ದಿನಗಳಿಂದ ಕಾಳಿಂಗ ಸರ್ಪಗಳು ವಸತಿ ಪ್ರದೇಶಕ್ಕೆ ಬರುತ್ತಿವೆ. ಅರಣ್ಯ ಇಲಾಖೆ ಹೆಚ್ಚು ಕಾಳಜಿವಹಿಸಿ ಹಾವನ್ನು ಹಿಡಿದು, ಜನರ ಆತಂಕ ನಿವಾರಿಸಬೇಕು’ ಎಂದರು.
ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಅವರ ಸಮ್ಮುಖದಲ್ಲಿ ಕುದುರೆಮುಖ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಯಿತು.