ಕೋಟ (ಬ್ರಹ್ಮಾವರ): ಕೋಟದ ಮೆಸ್ಕಾಂ ಉಪವಿಭಾಗ ಕಚೇರಿ ವ್ಯಾಪ್ತಿಯ ಜನಸಂಪರ್ಕ ಸಭೆ ಬುಧವಾರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಹಲವಾರು ವರ್ಷಗಳಿಂದ ಗೃಹಬಳಕೆ ವಿದ್ಯುತ್ ಬಿಲ್ನಲ್ಲಿ ಶೇ.9 ತೆರಿಗೆ ವಸೂಲಾತಿ ಮೆಸ್ಕಾಂನಿಂದ ಆಗುತ್ತಿದೆ. ಈ ಬಗ್ಗೆ ಮೆಸ್ಕಾಂ ಎಂ.ಡಿ ಅವರಿಗೆ ಪತ್ರದ ಮೂಲಕ ಉತ್ತರ ಕೇಳಿ, ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯ ಮೆಸ್ಕಾಂಗೆ ನೋಟಿಸ್ ಜಾರಿಗೊಳಿಸಿದರೂ ಉತ್ತರಿಸಲು ವಿಳಂಬಿಸುತ್ತಿದೆ. ಗ್ರಾಹಕರಿಗೆ ದೊಡ್ಡಮಟ್ಟದ ಬರೆ ಎಳೆಯುತ್ತಿರುವ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೋ.ಗಿ.ನಾ ಹಾಗೂ ದಿನೇಶ್ ಗಾಣಿಗ ಆಗ್ರಹಿಸಿದರು.
ಮೆಸ್ಕಾಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮರಗಳನ್ನು ಅನಾವಶ್ಯಕವಾಗಿ ಕಡಿಯಲಾಗುತ್ತಿದೆ. ಈ ಬಗ್ಗೆ ಇಲಾಖೆ ಜಾಗೃತಿ ವಹಿಸಬೇಕು ಎಂದು ಐರೋಡಿ ವಿಠ್ಠಲ ಪೂಜಾರಿ ಎಚ್ಚರಿಸಿದರು.
ಸಾಸ್ತಾನ ಮೆಸ್ಕಾಂನಲ್ಲಿ ಸಾಕಷ್ಟು ವರ್ಷಗಳಿಂದ ಲೈನ್ಮೆನ್ಗಳ ಕಾರ್ಯನಿರ್ವಹಣೆ ಅಲ್ಲೇ ಆಗಿದೆ. ಕೆಲವರು ಗ್ರಾಹಕರಿಂದ ಹೆಚ್ಚು ಹಣ ವಸೂಲಾತಿ ಮಾಡುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಾಪ್ ಶೆಟ್ಟಿ, ಐರೋಡಿ ವಿಠ್ಠಲ ಪೂಜಾರಿ ಆಗ್ರಹಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನದಿಯ ದಂಡೆಯ ಸರ್ಕಾರಿ ಸ್ಥಳದಲ್ಲಿ ಅಕ್ರಮ ಶೆಡ್ಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಅದು ನೆರೆಪೀಡಿತ ಭಾಗ. ಅಲ್ಲಿ ಸಂಪರ್ಕ ಕಲ್ಪಿಸಲು ಅವಕಾಶಗಳಿವೆಯೇ, ಅವಘಡ ಸಂಭವಿಸಿದರೆ ಹೊಣೆಗಾರರು ಯಾರು, ಬೇರೆ ಸ್ಥಳದ ಮೇಲೆ ಲೈಸೆನ್ಸ್, ಎನ್ಓಸಿ ಪಡೆದು ಸಂಪರ್ಕ ನೀಡಿದೆ ಎಂದು ಸಾಲಿಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜ ಗಾಣಿಗ ಪ್ರಶ್ನಿಸಿದರು.
ಗ್ರಾಹಕರ ಸಮಸ್ಯೆಗಳಿಗೆ ಉತ್ತರಿಸಿದ ಮೆಸ್ಕಾಂ ಉಡುಪಿ ವೃತ್ತ ಅಧೀಕ್ಷಕ ಎಂಜಿನಿಯರ್ ನರಸಿಂಹ, ಲೈನ್ಮೆನ್ಗಳ ವರ್ಗಾವಣೆ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮರ ಕಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಶಿವ ನಾಯ್ಕ, ಮೆಸ್ಕಾಂ ಅಧಿಕಾರಿಗಳಾದ ಗುರುಪ್ರಸಾದ್ ಭಟ್, ಪ್ರತಾಪ್ ಚಂದ್ರ ಶೆಟ್ಟಿ, ಶ್ರೀಕಾಂತ್, ಪ್ರಶಾಂತ್ ಶೆಟ್ಟಿ, ವೈಭವ್ ಶೆಟ್ಟಿ, ಮಹೇಶ್, ಸಂತೋಷ್ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.