ಉಡುಪಿ: ಆಯುರ್ವೇದಕ್ಕೆ ಮನುಷ್ಯನ ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯಿದೆ. ಆಯುರ್ವೇದವನ್ನು ಚಿಕಿತ್ಸಾ ಪದ್ಧತಿಗಿಂತಲೂ ಜೀವನ ಕ್ರಮ ಎಂದು ಪರಿಗಣಿಸಲಾಗುತ್ತದೆ ಎಂದು ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶನಿವಾರ ನಡೆದ ಕಾಲೇಜಿನ ವಿಶಿಖಾನುಪ್ರವೇಶ-ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಪತ್ಯ ಎಂಬ ಶಬ್ಧವನ್ನೇ ಬಳಸುವುದಿಲ್ಲ. ಆಹಾರದ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಪರಿಗಣಿಸಲಾಗುವುದಿಲ್ಲ. ಇದರಿಂದ ರೋಗಗಳು ಉಲ್ಬಣಿಸುವ ಸಾಧ್ಯತೆಗಳಿರುತ್ತದೆ. ಆಯುರ್ವೇದದಲ್ಲಿ ಪತ್ಯ ಮುಖ್ಯವಾಗಿದ್ದು, ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಪೂರಕ ಆಹಾರವನ್ನು ಮಾತ್ರ ನೀಡಲಾಗುತ್ತದೆ ಎಂದರು.
ನವದೆಹಲಿಯ ಸಿಸಿಆರ್ಎಎಸ್ನ ಆಡಳಿತ ನಿರ್ದೇಶಕ ಪ್ರೊ.ವೈದ್ಯ ಕರ್ತಾರ್ ಸಿಂಗ್ ಧೀಮನ್ ಮಾತನಾಡಿ, ‘ಆಯುರ್ವೇದವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆಯುರ್ವೇದವನ್ನು ಚಿಕಿತ್ಸೆಯ ಬದಲು ಬದುಕಿನ ಭಾಗವನ್ನಾಗಿ ಪರಿಗಣಿಸಲಾಗುತ್ತದೆ. ಮನುಷ್ಯನ ಬದುಕು, ಆರೋಗ್ಯಕ್ಕೆ ಸಂಬಂಧಿಸಿದ ಔಷಧೀಯ ವಿಧಾನವಾಗಿದೆ’ ಎಂದರು.
ಕೇವಲ ಸಲಹೆ, ಮಾರ್ಗದರ್ಶನ ನೀಡಿದರೆ ಸಾಲದು; ಆಯುರ್ವೇದ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಗುಣಾತ್ಮಕ ಯೋಚನೆಗಳು ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುರ್ವೇದ ಶಾಸ್ತ್ರವನ್ನು ಅರಿತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. 64 ಸ್ನಾತಕ,20 ಸ್ನಾತಕೋತ್ತರ ಹಾಗೂ ಇಬ್ಬರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಎಸ್ಡಿಎಂ ಆಯುರ್ವೇದ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಹಾಸನ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ರಾವ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಕೆ.ಮಮತಾ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ನಿರಂಜನ್ ರಾವ್, ಸ್ನಾತಕ ವಿಭಾಗದ ಡೀನ್ ಡಾ.ಸುಚೇತ ಕುಮಾರಿ, ಹೇಮಾವತಿ ಹೆಗ್ಗಡೆ, ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು.
ಆಯುರ್ವೇದ ವಿಶಿಷ್ಟ ಕಲಿಕಾ ವಿಧಾನ
ಆಯುರ್ವೇದ ವಿಜ್ಞಾನ ವಿಶಿಷ್ಟ ಕಲಿಕಾ ವಿಧಾನವಾಗಿದ್ದು, ಉತ್ತಮವಾದ ಗುಣಾತ್ಮಕ ಅಂಶಗಳನ್ನು ಕಲಿಯಲು ಸಹಕಾರಿಯಾಗಿದೆ. ಆರ್ಯವೇದ ಕಲಿಯುವ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗಾಗಿ ಕೊಡುಗೆ ನೀಡಬೇಕು ಎಂದು ಹೊಸ ದೆಹಲಿಯ ಸಿಸಿಆರ್ಎಎಸ್ನ ಆಡಳಿತ ನಿರ್ದೇಶಕ ಪ್ರೊ. ವೈದ್ಯ ಕರ್ತಾರ್ ಸಿಂಗ್ ಧೀಮನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.