ಉಡುಪಿ: ಆಯುರ್ವೇದ ಜನಸಾಮಾನ್ಯರಿಗೂ ತಲುಪಬೇಕು ಹಾಗೂ ಸಂಶೋಧನೆಗಳ ಫಲ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಎಂದುಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ ಕಟೇಚ ಹೇಳಿದರು.
ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ಕರ್ಮಸಿದ್ಧಿ 2 ದಿನಗಳ ಅಂತರ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಸದಾ ನೀರಿನಂತೆ ಹರಿಯುತ್ತಾ ಸಂಶೋಧನೆಗಳು ನಡೆದು ಅದರ ಲಾಭ ಜನರಿಗೆ ಸಿಗಬೇಕು. ಆಹಾರ, ಔಷಧ, ಚಿಕಿತ್ಸಾ ಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ಪಂಚಕರ್ಮ ಪದ್ಧತಿಯ ಬಗ್ಗೆಯೂ ಹೆಚ್ಚು ಅಧ್ಯಯನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಎಸ್ಡಿಎಂ ಶಿಕ್ಷಣ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಯಶೋವರ್ಮ ಮಾತನಾಡಿ, ಈಚೆಗೆ ಆಯುರ್ವೇದ ಚಿಕಿತ್ಸಾ ಪದ್ಧತಿಯತ್ತ ಜನರು ವಾಲುತ್ತಿದ್ದು, ಇನ್ನಷ್ಟು ಸುಧಾರಣೆಗಳಾಗಬೇಕು. ಲಭ್ಯ ಗಿಡಮೂಲಿಕೆಗಳ ಶೇ 10ರಷ್ಟು ಮಾತ್ರ ಬಳಕೆಯಲ್ಲಿದ್ದು, ಗರಿಷ್ಠ ಪ್ರಮಾಣದ ಗಿಡಮೂಲಿಕೆಗಳ ಬಳಕೆಯಾಗಬೇಕು ಎಂದರು.
ಆಧುನೀಕರಣದ ಭರಾಟೆಯ ನಡುವೆ ಗಿಡಮೂಲಿಕೆಗಳ ಬಳಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆದು, ಪರಿಸರ ಪೂರಕ ಜೀವನಕ್ರಮಕ್ಕೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿಸಮ್ಮೇಳನದ ಸ್ಮರಣ ಸಂಚಿಕೆ ‘ಕರ್ಮಸಿದ್ಧಿ’ಯನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜು ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ ಸ್ವಾಗತಿಸಿದರು. ಡಾ.ಹೆಜಮಾಡಿ ಶ್ರೀನಿವಾಸ ಆಚಾರ್ಯ ಮಾತನಾಡಿದರು. ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಜಗದೀಶ ಕುಂಜಾಲು, ಪ್ರಕೃತಿ ಚಿಕಿತ್ಸೆ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಎಸ್ಡಿಎಂ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ನವೀನ್ ಇದ್ದರು. ಡಾ.ನಿರಂಜನ ರಾವ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.