ಬ್ರಹ್ಮಾವರ: ಜೇನಿನ ಉತ್ಪನ್ನಗಳಿಂದ ಆಯುಸ್ಸನ್ನು ಹೆಚ್ಚು ಮಾಡುವ ಮತ್ತು ಅನೇಕ ರೋಗಗಳನ್ನು ಗುಣ ಮಾಡುವ ಶಕ್ತಿ ಇದೆ. ಆದ್ದರಿಂದ ಇದನ್ನು ಭೂಲೋಕದ ಅಮೃತ ಎಂದು ಕರೆಯಲಾಗುತ್ತಿದೆ ಎಂದು ಶಿರಸಿಯ ಜೇನು ಕೃಷಿಕ ಮಧುರೇಶ್ವರ ಹೆಗ್ಡೆ ಹೇಳಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಜೇನು ಹುಳುವಿನ ಉತ್ಪನ್ನಗಳ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೇನು ಕೃಷಿಗೆ ಇಂದು ಬಹಳ ಬೇಡಿಕೆ ಇದ್ದು, ಆದಾಯದೊಂದಿಗೆ ಉದ್ಯೋಗ ಸೃಷ್ಟಿಯೂ ಮಾಡಬಹುದು. ಇಂದು ಕಾಡಿನ ಬಹುತೇಕ ಸಸ್ಯರಾಶಿ ಜೇನು ಹುಳುಗಳಿಂದ ರಕ್ಷಿಸಲ್ಪಟ್ಟಿದೆ. ಜೇನು ಕೃಷಿಯಲ್ಲಿ ಆಸಕ್ತಿ ಮೂಡಿಸಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡಿದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಜೇನು ಕೃಷಿಕರ ಸಂಘಟನೆ ಅತೀ ಅಗತ್ಯವಿದ್ದು, ಅವರನ್ನು ಒಗ್ಗೂಡಿಸುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಲಕ್ಷ್ಮಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೇನು ಕೃಷಿಯೊಂದಿಗೆ ಜೇನಿನ ಮೌಲ್ಯವರ್ಧನೆ ಮಾಡಿದಲ್ಲಿ ಲಾಭ ಹೆಚ್ಚು. ನಮ್ಮ ಆರ್ಥಿಕ ಲಾಭದೊಂದಿಗೆ ದೇಶದ ಲಾಭ ಹೆಚ್ಚಿಸಲು ನಾವು ಪ್ರಯತ್ನಿಸಬೇಕು ಎಂದರು.
ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಸುಧೀರ ಕಾಮತ್, ಪ್ರಾಧ್ಯಾಪಕ ರೇವಣ್ಣ ರೇವಣ್ಣನವರ್, ಜೇನು ಕೃಷಿಕ ಸುರೇಶ ಕರ್ಕೆರಾ, ಸಂಪನ್ಮೂಲ ವ್ಯಕ್ತಿ ಮಡಿಕೇರಿಯ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಕೆಂಚರೆಡ್ಡಿ ಇದ್ದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಿ.ಧನಂಜಯ ಸ್ವಾಗತಿಸಿದರು. ವಿಜ್ಞಾನಿ ಸಚಿನ್ ಯು.ಎಸ್ ನಿರೂಪಿಸಿದರು.