ಉಡುಪಿ/ಕುಂದಾಪುರ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಯಾರ ಹೆಸರು ಪ್ರಸ್ತಾಪಿಸದಿದ್ದರೂ ಈಶ್ವರಪ್ಪ ಸೇರಿದಂತೆ ಹಲವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದು ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಹೆಮ್ಮಾಡಿ ಕಟ್ಬೆಲ್ತೂರಿನಲ್ಲಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲೆಗಳು ನಾಶವಾಗುವ ಮುನ್ನ ತನಿಖೆಗೆ ಗೃಹ ಸಚಿವರು ಇಚ್ಛಾಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.
ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕೌಟುಂಬಿಕ ಕಲಹ ಕಾರಣವಲ್ಲ, ರಾಜಕೀಯ ಒತ್ತಡ ಕಾರಣ ಇರಬಹುದು ಎಂದು ಸಂತೋಷ್ ಪತ್ನಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲು ಕಾರಣ ಏನು ಎಂಬ ಸತ್ಯ ಜನರಿಗೆ ತಿಳಿಯಬೇಕು. ತನಿಖೆ ನಡೆದರೆ ಆತ್ಮಹತ್ಯೆ ಯತ್ನಕ್ಕೆ ಕ್ಯಾಸೆಟ್ ಕಾರಣವೇ, ರೆಕಾರ್ಡಿಂಗ್ ಕಾರಣವೇ ಎಂಬ ವಿಚಾರ ತಿಳಿದು ಬರಲಿದೆ ಎಂದರು.
ಉಡುಪಿಯಲ್ಲಿ ಮಾತನಾಡಿದ ಶಿವಕುಮಾರ್, ‘ಸಂತೋಷ್ಗೆ ಸಣ್ಣ ವಯಸ್ಸಿನಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು. ಸುಮ್ಮನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅಧಿಕಾರಕ್ಕೆ ತೊಂದರೆಯಾಗಿರಬಹುದು, ಹೆಸರಿಗೆ ಕುಂದು ಬಂದಿರಲೂಬಹುದು. ಏನೇ ಇರಲಿ ಸತ್ಯ ಹೊರಬರಬೇಕು. ಸಂತೋಷ್ ಆತ್ಮಹತ್ಯೆ ಸಂಬಂಧ ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ. ಸ್ನೇಹಿತರು ತಿಳಿಸಿದ್ದ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿದ್ದೇನೆ ಅಷ್ಟೆ ಎಂದರು.
ಲವ್ ಜಿಹಾದ್ ವಿರುದ್ಧ ಕಾನೂನು ತರುವ ಮುನ್ನ ಯಾವ ಲೀಡರ್ಗಳ ಮಕ್ಕಳು ಯಾರನ್ನು ಲವ್ ಮಾಡಿದ್ದಾರೆ, ಯಾರನ್ನು ಮದುವೆಯಾಗಿದ್ದಾರೆ ಎಂದು ತಿಳಿದುಕೊಂಡರೆ ಉತ್ತಮ. ದೇದದಲ್ಲಿ ಸ್ವಇಚ್ಛೆ, ಧರ್ಮ, ಪ್ರೀತಿ, ವಿಶ್ವಾಸ ಮಾನವೀಯತೆ ಮುಖ್ಯ ಎಂದರು.